ಈ ಕ್ರಿಕೆಟರ್ಗಳನ್ನು ಬರೀ ಆಟದ ಮೈದಾನದಲ್ಲಿ ಬೆಂಬಲ ಕೊಡುವುದನ್ನು ಬಿಟ್ಟು ದಿನವಿಡೀ ಅವರದ್ದೇ ಸುದ್ದಿ ಮಾಡುವುದು ಮಾಧ್ಯಮಗಳಿಗೂ ಇಷ್ಟ, ಅವುಗಳನ್ನೇ ಓದುವುದು ಓದುಗರಿಗೂ ಬಲೇ ಇಷ್ಟವೆಂದು ತೋರುತ್ತದೆ.
ದೇಶದ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಕಾದಾಡಿ ಹುತಾತ್ಮರಾಗುವ ಯೋಧರಿಗೆ ಈ ಚಳಿಗಾಲದಲ್ಲಿ ಎದುರಾಗುತ್ತಿರುವ ಸವಾಲುಗಳಿಗಿಂತ, ಕ್ರಿಕೆಟರ್ಗಳು ರೆಸ್ಟೋರೆಂಟ್ಗೆ ಹೋಗಿ ತಿನ್ನುವುದು ಸಾರ್ವಜನಿಕ ಪ್ರಾಶಸ್ತ್ಯ ಪಡೆದ ವಿಚಾರ ಎಂಬುದು ಒಪ್ಪಿತವಾದ ಸತ್ಯವಾಗಿಬಿಟ್ಟಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿರುವ ಬಯೋ-ಸೆಕ್ಯೂರಿಟಿ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿ ಮೆಲ್ಬರ್ನ್ನ ರೆಸ್ಟೋರೆಂಟ್ ಒಂದರಲ್ಲಿ ತಿನ್ನಲು ಹೋಗಿದ್ದ ಟೀಂ ಇಂಡಿಯಾದ ಐವರು ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಎದುರಿಸುತ್ತಿದ್ದಾರೆ.
ಬೇಜವಾಬ್ದಾರಿಯ ವರ್ತನೆ ಕಾರಣದಿಂದ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ, ರಿಶಭ್ ಪಂತ್, ಶುಭ್ಮನ್ ಗಿಲ್, ನವ್ದೀಪ್ ಸೈನಿ ಹಾಗೂ ಪೃಥ್ವಿ ಶಾ ಅವರನ್ನು ಐಸೋಲೇಷನ್ನಲ್ಲಿ ಇಡಲಾಗಿದ್ದು, ರೆಸ್ಟೋರೆಂಟ್ನಲ್ಲಿ ಇದ್ದ ಅವರ ವಿಡಿಯೋ ವೈರಲ್ ಆದ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಬಿಸಿಸಿಐ ಜಂಟಿ ತನಿಖೆಗೆ ಮುಂದಾಗಿವೆ.
ಇದೇ ವೇಳೆ ರೆಸ್ಟೋರೆಂಟ್ನಲ್ಲಿ ಕ್ರಿಕೆಟಿಗರು ಬೀಫ್ ತಿಂದಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ. ಈ ಬಗ್ಗೆ ರೋಹಿತ್ ಶರ್ಮಾರನ್ನಂತೂ ಹಿಗ್ಗಾಮುಗ್ಗಾ ಟೀಕಾಸ್ತ್ರಗಳು ಬೆನ್ನು ಬಿದ್ದಿವೆ.
“ಹೋಳಿ, ದೀಪಾವಳಿಗಳ ದಿನದಂದು ಪ್ರಾಣಿದಯಾ ಕಾರ್ಯಕರ್ತರಾಗುವ ರೋಹಿತ್, ಮತ್ತೊಂದು ದಿನ ತಮ್ಮ ತಂಡದೊಂದಿಗೆ ಹೋಗಿ ಬೀಫ್ ತಿನ್ನುತ್ತಾರೆ. ಗೋಮಾಂಸ ತಿನ್ನುವುದು ಹಾಗೂ ಗೋಹತ್ಯೆಗೆ ಬೆಂಬಲು ಕೊಡುವುದು ಅವರ ಪ್ರಕಾರ ಪ್ರಾಣಿದಯಾ ಚಟುವಟಿಕೆ ಇರಬಹುದು” ಎಂದು ಟ್ವಿಟರ್ ಬಳಕೆದಾರರೊಬ್ಬರು ರೋಹಿತ್ರನ್ನು ಟೀಕಿಸಿದ್ದಾರೆ.
ರೋಹಿತ್ ವಿರುದ್ಧ ಕೇಳಿಬಂದ ಟೀಕಾಸ್ತ್ರಗಳಿಗೆ ಅವರ ಅಭಿಮಾನಿಗಳು ಯುದ್ಧವನ್ನೇ ಸಾರಿದ್ದು, ತಮ್ಮ ಮೆಚ್ಚಿನ ಕ್ರಿಕೆಟರ್ಗೆ ನೈತಿಕ ಬೆಂಬಲ ಕೊಡುವುದು ತಮ್ಮ ಆದ್ಯ ಕರ್ತವ್ಯ ಎಂಬಂತೆ ಬೆಂಬಲದ ಟ್ವೀಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.