ನವದೆಹಲಿ: ಕ್ರಿಕೆಟ್ ಪಂದ್ಯದ ವೇಳೆ ಚೆಂಡಿಗೆ ಹೊಳಪು ನೀಡಲು ಮತ್ತು ಬೇರೆ ಕಾರಣದಿಂದ ಎಂಜಲು ಸವರುವ ಪರಿಪಾಠ ಹಿಂದಿನಿಂದಲೂ ಇದೆ.
ಈಗ ಕೊರೋನಾ ಬಿಕ್ಕಟ್ಟು ಬಗೆಹರಿದ ನಂತರ ಕ್ರಿಕೆಟ್ ನಲ್ಲಿ ಹೊಸ ನಿಯಮ ತರಬಹುದೆಂಬ ಚರ್ಚೆ ನಡೆದಿದೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಚೆಂಡಿಗೆ ಎಂಜಲು ಸವರುವ ತಂತ್ರಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಂಜಲು ಸವರಿದರೆ ಸೋಂಕು ಹರಡಬಹುದಾದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉಗುಳು ಸವರುವ ತಂತ್ರಕ್ಕೆ ಬ್ರೇಕ್ ಹಾಕುವ ಬಗ್ಗೆ ಚರ್ಚೆ ನಡೆದಿದೆ. ಇಂತಹ ಪರಿಪಾಠವನ್ನು ನಿಲ್ಲಿಸಬೇಕೆಂದು ಮಾಜಿ ಬೌಲರ್ ಗಳಾದ ಪ್ರವೀಣ್ ಕುಮಾರ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಪಂದ್ಯದಲ್ಲಿ ಚೆಂಡಿಗೆ ಉಗುಳು ಸವರದೇ ಯಶಸ್ಸು ಗಳಿಸಬಹುದು. ಆದರೆ ಟೆಸ್ಟ್ ಪಂದ್ಯಗಳಲ್ಲಿ ಎಂಜಲು ಸವರುವುದನ್ನು ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಚೆಂಡು ಸ್ವಿಂಗ್ ಆಗಲಿ ಎಂಬುದು ಸೇರಿದಂತೆ ಹಲವು ಕಾರಣಗಳಿಗೆ ಎಂಜಲು ಸವರುವ ಪರಿಪಾಠ ಬೆಳೆದು ಬಂದಿದೆ. ಈಗ ಆರೋಗ್ಯದ ದೃಷ್ಟಿಯಿಂದ ಪರ್ಯಾಯ ದಾರಿ ಕಂಡುಕೊಳ್ಳಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.