ತುಮಕೂರು : ಹೆಂಡತಿ ಕಾಟಕ್ಕೆ ಮನನೊಂದು ‘ನಮ್ಮಮೆಟ್ರೋ’ ಎಂಜಿನಿಯರ್’ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ.
‘ನೀನು ಹಳ್ಳಿ ಗುಗ್ಗು’ ಎಂದು ಪದೇ ಪದೇ ಕಿಚಾಯಿಸ್ತಿದ್ದ ಹೆಂಡತಿ ಮಾತಿಗೆ ಮನನೊಂದು ‘ನಮ್ಮ ಮೆಟ್ರೋ’ ಎಂಜಿನಿಯರ್’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರನ್ನು 38 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಮಂಜುನಾಥ್ ಬೆಂಗಳೂರಿನ ಬಿಎಂಆರ್ಸಿಎಲ್ ನಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದರು. ಇಂಜಿನಿಯರ್ ಅಂದರೆ ಸಂಬಳಕ್ಕೇನು ಕೊರತೆ ಇಲ್ಲ. ಕೈ ತುಂಬ ಸಂಬಳ ಪಡೆಯುತ್ತಿದ್ದರು. ಆದರೆ ಹೆಂಡತಿ ಪ್ರಿಯಾಂಕಾ ಕಾಟಕ್ಕೆ ಮನನೊಂದು ಪತಿ ಸಾವಿನ ಹಾದಿ ಹಿಡಿದಿದ್ದು ದುರಂತವೇ ಹೌದು.
ಮದುವೆ ಆದಾಗಿನಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪದೇ ಪದೇ ಹೆಂಡತಿ ಗಂಡನನ್ನು ಹೀಯಾಳಿಸುತ್ತಿದ್ದಳಂತೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇಲ್ಲ ಎಂದು ಪತಿಯನ್ನು ಪತ್ನಿ ಹೀಯಾಳಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬಗ್ಗೆ ಮಂಜುನಾಥ್ ಕುಟುಂಬಸ್ಥರು ಪ್ರಿಯಾಂಕಾ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ವಿರುದ್ಧ ಎಫ್ಐಆರ್ ದಾಖಲಾಗಿದೆ.