ಕಲ್ಬುರ್ಗಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 12 ವರ್ಷಗಳ ನಂತರ ಮನೆಗೆ ಮರಳಿದ ಘಟನೆ ಕಲಬುರ್ಗಿ ಜಿಲ್ಲೆ ಲಾಡಚಿಂಚೋಳಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಚಂದ್ರಕಾಂತ ಹರವಾಳ್ ಮನೆಗೆ ಮರಳಿದ ವ್ಯಕ್ತಿಯಾಗಿದ್ದಾರೆ. 12 ವರ್ಷಗಳ ಹಿಂದೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ದಿಢೀರ್ ನಾಪತ್ತೆಯಾಗಿದ್ದು, ಈ ಬಗ್ಗೆ ದೂರು ನೀಡಲಾಗಿತ್ತು. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಚಂದ್ರಕಾಂತ್ ಸುಳಿವು ಸಿಕ್ಕಿರಲಿಲ್ಲ. ವಾರದ ಹಿಂದೆ ಕೇರಳದ ಕೊಲ್ಲಂನಲ್ಲಿರುವ ಪಠಣಪುರಂ ಗಾಂಧಿ ಭವನ ಸ್ವಯಂ ಸೇವಾ ಸಂಸ್ಥೆಯಲ್ಲಿ ಚಂದ್ರಕಾಂತ್ ಇರುವುದಾಗಿ ಮಾಹಿತಿ ಗೊತ್ತಾಗಿದೆ.
ನರೋಣಾ ಪೊಲೀಸರು ಕೇರಳದಿಂದ ಚಂದ್ರಕಾಂತ್ ರನ್ನು ಕರೆದುಕೊಂಡು ಬಂದು ಪತ್ನಿಗೆ ಒಪ್ಪಿಸಿದ್ದಾರೆ. ಮನೆ ಬಿಟ್ಟು ಹೋಗಿದ್ದ ಚಂದ್ರಕಾಂತ್ ಕೊಲ್ಲಂಗೆ ಹೋಗಿ ಅಲ್ಲಿ ಮಾನಸಿಕ ಅಸ್ವಸ್ಥನ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡ ನಂತರ ತನ್ನ ಊರಿನ ಬಗ್ಗೆ ಚಂದ್ರಕಾಂತ್ ಮಾಹಿತಿ ನೀಡಿದ್ದು, ಸಂಸ್ಥೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅವರನ್ನು ಕರೆತಂದು ಮನೆಯವರಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ.