alex Certify ನಾಳೆ 88 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ 88 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖರು

ನವದೆಹಲಿ: 18 ನೇ ಲೋಕಸಭೆ ಚುನಾವಣೆ 2024 ರ ಎರಡನೇ ಹಂತವು ನಾಳೆ ಏಪ್ರಿಲ್ 26 ರಂದು(ಶುಕ್ರವಾರ) ನಡೆಯಲಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಲೋಕಸಭಾ ಕ್ಷೇತ್ರಗಳ ಮತದಾರರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ಕೇರಳದಲ್ಲಿ ಎಲ್ಲಾ 20, ಕರ್ನಾಟಕದಲ್ಲಿ 14, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 6, ಬಿಹಾರ ಮತ್ತು ಅಸ್ಸಾಂನಲ್ಲಿ ತಲಾ 5, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಸ್ಥಾನಗಳು ಮತ್ತು ಮಣಿಪುರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಅಭ್ಯರ್ಥಿಯ ಸಾವಿನಿಂದಾಗಿ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಈ ಹಿಂದೆ ಘೋಷಿಸಿತ್ತು. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಜೂನ್ 4 ರಂದು ಎಲ್ಲಾ ಸೀಟುಗಳ ಫಲಿತಾಂಶ ಪ್ರಕಟವಾಗಲಿದೆ.

ಎರಡನೇ ಹಂತದ ಚುನಾವಣಾ ಸಮರದಲ್ಲಿ ಹಲವು ಪ್ರಮುಖ ಅಭ್ಯರ್ಥಿಗಳು ಸೆಣಸುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್, ಕೆ.ಮುರಳೀಧರನ್ ಮತ್ತು ಕೆ.ಸುಧಾಕರನ್, ಸಿಪಿಎಂ ಅಭ್ಯರ್ಥಿಗಳಾದ ಎಲಮರಮ್ ಕರೀಂ, ಕೆ.ಕೆ.ಶೈಲಜಾ, ಸಿ.ರವೀಂದ್ರನಾಥ್ ಮತ್ತು ಎಂ.ವಿ.ಜಯರಾಜನ್ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ(ಬಿಜೆಪಿ) ಕೆ ಸುರೇಂದ್ರನ್, ಸುರೇಶ್ ಗೋಪಿ, ವಿ. ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಕೂಡ ದಕ್ಷಿಣ ರಾಜ್ಯದಿಂದ ಕೇಸರಿ ಪಕ್ಷದ ಖಾತೆ ತೆರೆಯಲು ಪ್ರಯತ್ನಿಸುತ್ತಿದ್ದಾರೆ.

2019ರಲ್ಲಿ ಕೇರಳದಲ್ಲಿ ಬಿಜೆಪಿಗೆ ಯಾವುದೇ ಸ್ಥಾನ ಗೆದ್ದಿಲ್ಲ. ಇತರ ಪ್ರಮುಖ ಅಭ್ಯರ್ಥಿಗಳೆಂದರೆ ತುಷಾರ್ ವೆಲ್ಲಪ್ಪಳ್ಳಿ(ಬಿಡಿಜೆಎಸ್), ಥಾಮಸ್ ಚಾಜಿಕಡನ್ (ಕೇರಳ ಕಾಂಗ್ರೆಸ್-ಮಣಿ), ಫ್ರಾನ್ಸಿಸ್ ಜಾರ್ಜ್ (ಕೇರಳ ಕಾಂಗ್ರೆಸ್), ಎನ್‌ಕೆ ಪ್ರೇಮಚಂದ್ರನ್ (ಆರ್‌ಎಸ್‌ಪಿ), ಇಟಿ ಮೊಹಮ್ಮದ್ ಬಶೀರ್ (ಐಯುಎಂಎಲ್) ಮತ್ತು ಅನ್ನಿ ರಾಜಾ (ಸಿಪಿಐ).

ಕರ್ನಾಟಕದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಸಿ.ಎನ್. ಮಂಜುನಾಥ್ ಮತ್ತು ಗೋವಿಂದ್ ಕಾರಜೋಳ ಪ್ರಮುಖ ಅಭ್ಯರ್ಥಿಗಳು. ಕಾಂಗ್ರೆಸ್ ನ ಡಿ.ಕೆ.ಸುರೇಶ್, ರಾಜೀವ್ ಗೌಡ, ಸೌಮ್ಯಾರೆಡ್ಡಿ, ಬಿ.ಎನ್.ಚಂದ್ರಪ್ಪ, ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಜನತಾದಳ ಸೆಕ್ಯುಲರ್(ಜೆಡಿಎಸ್)ನ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರೂ ಕಣದಲ್ಲಿದ್ದಾರೆ.

ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್, ಕೈಲಾಶ್ ಚೌಧರಿ, ಚಂದ್ರಪ್ರಕಾಶ್ ಜೋಶಿ, ಓಂ ಬಿರ್ಲಾ ಮತ್ತು ದುಶ್ಯಂತ್ ಸಿಂಗ್ ರಾಜಸ್ಥಾನದಲ್ಲಿ ಕೆಲವು ಪ್ರಮುಖ ಅಭ್ಯರ್ಥಿಗಳು. ಕಾಂಗ್ರೆಸ್‌ನ ಸಿಪಿ ಜೋಶಿ, ವೈಭವ್ ಗೆಹ್ಲೋಟ್, ಪ್ರಹ್ಲಾದ್ ಗುಂಜಾಲ್ ಮತ್ತು ಉದಯ್ ಲಾಲ್ ಅಂಜನಾ ಮತ್ತು ರವೀಂದ್ರ ಸಿಂಗ್ ಭಾಟಿ (ಸ್ವತಂತ್ರ) ಕೂಡ ಕಣದಲ್ಲಿದ್ದಾರೆ.

ಮೀರತ್, ಬಾಗ್‌ಪತ್, ಘಾಜಿಯಾಬಾದ್, ಗೌತಮ್ ಬುದ್ಧ ನಗರ ಮತ್ತು ಮಥುರಾ ಸೇರಿದಂತೆ 8 ಸ್ಥಾನಗಳಿಗೆ ಎಪ್ರಿಲ್ 26 ರಂದು ಮತದಾನ ನಡೆಯಲಿರುವ ಉತ್ತರ ಪ್ರದೇಶ ಎರಡನೇ ಹಂತದಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದೆ. ಹೇಮಾ ಮಾಲಿನಿ(ಬಿಜೆಪಿ), ಮಹೇಶ್ ಶರ್ಮಾ (ಬಿಜೆಪಿ), ಅಮರ್‌ಪಾಲ್ ಶರ್ಮಾ (ಎಸ್‌ಪಿ), ಅರುಣ್ ಗೋವಿಲ್ (ಬಿಜೆಪಿ), ಡ್ಯಾನಿಶ್ ಅಲಿ (ಕಾಂಗ್ರೆಸ್) ಮತ್ತು ಸತೀಶ್ ಕುಮಾರ್ ಗೌತಮ್ (ಬಿಜೆಪಿ) ಕೆಲವು ಪ್ರಮುಖ ಅಭ್ಯರ್ಥಿಗಳು. ಮಧ್ಯಪ್ರದೇಶದಲ್ಲಿ ಬಿಜೆಪಿಯ ವೀರೇಂದ್ರ ಕುಮಾರ್ ಖಟಿಕ್ ಮತ್ತು ವಿಡಿ ಶರ್ಮಾ ಮತ್ತು ಕಾಂಗ್ರೆಸ್ ಪಕ್ಷದ ತರ್ವರ್ ಸಿಂಗ್ ಲೋಧಿ ಮತ್ತು ಸಿದ್ಧಾರ್ಥ್ ಸುಖಲಾಲ್ ಕುಶ್ವಾಹ ಅವರು ಲೋಕಸಭೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಕೆಲವು ಪ್ರಮುಖ ಅಭ್ಯರ್ಥಿಗಳು.

ಲೋಕಸಭೆ ಚುನಾವಣೆಯ ಎರಡನೇ ಹಂತದ ಇತರ ಪ್ರಮುಖ ಅಭ್ಯರ್ಥಿಗಳೆಂದರೆ ನವನೀತ್ ಕೌರ್ ರಾಣಾ (ಬಿಜೆಪಿ), ಪ್ರಕಾಶ್ ಅಂಬೇಡ್ಕರ್ (ವಿಬಿಎ), ವಸಂತರಾವ್ ಬಲವಂತರಾವ್ ಚವಾಣ್ (ಕಾಂಗ್ರೆಸ್), ಪ್ರತಾಪ್ರರಾವ್ ಗಣಪತ್ರಾವ್ ಜಾಧವ್ (ಶಿವಸೇನೆ), ಮಹದೇವ್ ಜಾಂಕರ್ (ಆರ್ಎಎಸ್ಪಿ), ಸಂಜಯ್ ದೇಶಮುಖ್ ( ಶಿವಸೇನೆ-ಯುಬಿಟಿ), ದಿಲೀಪ್ ಸೈಕಿಯಾ (ಬಿಜೆಪಿ), ಕೃಪಾನಾಥ್ ಮಲ್ಲಾಹ್ (ಬಿಜೆಪಿ), ಪ್ರದ್ಯುತ್ ಬೊರ್ಡೊಲೊಯ್ (ಕಾಂಗ್ರೆಸ್), ಜಯ್ ಪ್ರಕಾಶ್ ನಾರಾಯಣ್ ಯಾದವ್ (ಆರ್‌ಜೆಡಿ), ತಾರಿಕ್ ಅನ್ವರ್ (ಕಾಂಗ್ರೆಸ್), ಬಿಮಾ ಭಾರತಿ (ಆರ್‌ಜೆಡಿ), ಪಪ್ಪು ಯಾದವ್ (ಸ್ವತಂತ್ರ), ಭೂಪೇಶ್ ಬಘೇಲ್ (ಕಾಂಗ್ರೆಸ್), ತಾಮ್ರಧ್ವಜ್ ಸಾಹು (ಕಾಂಗ್ರೆಸ್), ರಾಜು ಬಿಸ್ತಾ (ಬಿಜೆಪಿ), ಸುಕಾಂತ ಮಜುಂದಾರ್ (ಬಿಜೆಪಿ), ಬಿಪ್ಲಬ್ ಮಿತ್ರ (ಟಿಎಂಸಿ) ಮತ್ತು ಜುಗಲ್ ಕಿಶೋರ್ ಶರ್ಮಾ (ಬಿಜೆಪಿ).

2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಈ 88 ಸ್ಥಾನಗಳಲ್ಲಿ 61 ಸ್ಥಾನಗಳನ್ನು ಗೆದ್ದಿದೆ(ಬಿಜೆಪಿ 52, ಶಿವಸೇನೆ 4, ಜೆಡಿಯು 4 ಮತ್ತು ಸ್ವತಂತ್ರ 1). ಕಾಂಗ್ರೆಸ್ ನೇತೃತ್ವದ ಯುಪಿಎ 24 ಸ್ಥಾನಗಳನ್ನು(ಕಾಂಗ್ರೆಸ್ 18, ಐಯುಎಂಎಲ್ 2, ಜೆಡಿಎಸ್ 1, ಕೇರಳ ಕಾಂಗ್ರೆಸ್ ಮಣಿ 1, ಆರ್‌ಎಸ್‌ಪಿ 1 ಮತ್ತು ಸ್ವತಂತ್ರ 1) ಮತ್ತು ಇತರ ಪಕ್ಷಗಳು 3 ಸ್ಥಾನಗಳನ್ನು ಗೆದ್ದವು(ಬಿಎಸ್‌ಪಿ 1, ಸಿಪಿಎಂ 1 ಮತ್ತು ಎನ್‌ಪಿಎಫ್ 1).

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...