ಚಿರತೆ ದಾಳಿಯ ಮತ್ತೊಂದು ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ವೀಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದೆ. ಸೆರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ ಚಿರತೆ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ ಈ ವಿಡಿಯೋವನ್ನು ಪಾಣಿಪತ್ ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಇವರಿಂದ ತಪ್ಪಿಸಿಕೊಳ್ಳಲು ಚಿರತೆ ತನ್ನ ಎದುರು, ಅಕ್ಕ-ಪಕ್ಕಕ್ಕೆ ಬಂದವರ ಮೇಲೆ ದಾಳಿ ಮಾಡುತ್ತಿರುವ ದೃಶ್ಯಗಳಿವೆ.
ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್ ಹಾಡು ಹಾಡಿದ ʼದಾದಿ ಮಾʼ
ಚಿರತೆಯ ದಾಳಿಯಿಂದ ಹಲವಾರು ಸಿಬ್ಬಂದಿ ಗಾಯಗೊಂಡರಾದರೂ ಯಾರಿಗೂ ಪ್ರಾಣಾಪಾಯವಾಗುವ ರೀತಿಯಲ್ಲಿ ಗಾಯಗಳಾಗಿಲ್ಲ. ಸುಮಾರು ಸಮಯದವರೆಗೆ ಮಾನವ ಮತ್ತು ಚಿರತೆ ಸಂಘರ್ಷ ನಡೆದಿದೆ. ಅಂತಿಮವಾಗಿ ಧೈರ್ಯಶಾಲಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಳಿಯ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ನಿಬ್ಬೆರಗಾಗಿದ್ದು, ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೋರಿದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಬ್ಬಬ್ಬಾ, ಸಿಬ್ಬಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಈ ರಕ್ಕಸನಂತಹ ಚಿರತೆ ದಾಳಿಯನ್ನೂ ಸಹಿಸಿಕೊಂಡು ಅದನ್ನು ಜೀವಂತವಾಗಿ ಸೆರೆ ಹಿಡಿದಿರುವ ಸಾಹಸ ನಿಜಕ್ಕೂ ಮೆಚ್ಚುವಂತಹದ್ದು, ಅಂತಿಮವಾಗಿ ಚಿರತೆ ಸೇರಿದಂತೆ ಎಲ್ಲರೂ ಸುರಕ್ಷಿತವಾದರಲ್ಲಾ ! ಎಂದು ಆಶ್ಚರ್ಯಚಕಿತರಾಗಿ ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ.