ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಕೆಎಂಎಫ್ ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಹಾಲನ್ನು ಏಪ್ರಿಲ್ 30ರ ವರೆಗೂ ಖರೀದಿಸಿ ಬಡವರಿಗೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತಿದೆ. ಇದನ್ನು ಏಪ್ರಿಲ್ 30ರ ವರೆಗೂ ವಿಸ್ತರಿಸಲಾಗುವುದು. ಉಚಿತವಾಗಿ ಹಾಲು ವಿತರಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಲಾಕ್ ಡೌನ್ ನಿಂದಾಗಿ ಹಾಲು ಒಕ್ಕೂಟಗಳಲ್ಲಿ ಪ್ರತಿ ದಿನ 7.25 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದೆ. ಕೆಲವು ಒಕ್ಕೂಟಗಳು ಉತ್ಪಾದಕರಿಂದ ಹಾಲು ಖರೀದಿ ನಿಲ್ಲಿಸಿದ್ದವು. ಉತ್ಪಾದಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಂಡ ಸಿಎಂ ಸರ್ಕಾರದಿಂದಲೇ ಹಾಲು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಲು ಯೋಜನೆ ರೂಪಿಸಿದ್ದಾರೆ.
ಈಗಾಗಲೇ ಹಾಲು ವಿತರಣೆ ಕಾರ್ಯ ಮುಂದುವರೆದಿದ್ದು ಸುಮಾರು 55 ಕೋಟಿ ರೂಪಾಯಿ ಮೊತ್ತದ ಹಾಲನ್ನು ಖರೀದಿಸಲಾಗಿದೆ. ಏಪ್ರಿಲ್ 30 ರ ವರೆಗೆ ಹಾಲು ವಿತರಣೆ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.