ರಾಜ್ಯದಲ್ಲಿ ಬಸ್ ಸಂಚಾರ ಆರಂಭಿಸುವ ಕುರಿತಂತೆ ರಾಜ್ಯ ಸರ್ಕಾರ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡಿದೆ. ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಲಾಗಿದ್ದು, ನಾಳೆಯಿಂದಲೇ ಸಂಚಾರ ಆರಂಭವಾಗಲಿದೆ.
ಬಸ್ ಸಂಚಾರ ಆರಂಭ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಕೆಲವರು ಬಸ್ ಸಂಚಾರದ ಪರ ಮಾತನಾಡಿದರೆ ಮತ್ತೆ ಹಲವರು ಬಸ್ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸದರೆನ್ನಲಾಗಿದೆ.
ಆದರೆ ಬಸ್ ಸಂಚಾರ ಆರಂಭವಾಗದಿದ್ದರೆ ಸಿಬ್ಬಂದಿಗೆ ಸಂಬಳ ನೀಡುವುದು ಕಷ್ಟ ಎಂಬ ಕಾರಣಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಸಂಚಾರ ಆರಂಭಿಸಲು ಕೊನೆಗೂ ತೀರ್ಮಾನಿಸಲಾಗಿದೆ.
ಒಂದು ಬಸ್ ನಲ್ಲಿ ಕೇವಲ 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಸ್ ಸಂಚಾರ ಇರುವುದಿಲ್ಲ. ಹೊರ ರಾಜ್ಯಗಳಿಗೂ ಕೆ.ಎಸ್.ಆರ್. ಟಿ.ಸಿ. ಬಸ್ ಸಂಚಾರ ಇರುವುದಿಲ್ಲವೆನ್ನಲಾಗಿದ್ದು, ಅಂತರ್ ಜಿಲ್ಲೆಗಳಲ್ಲಿ ಮಾತ್ರ ಈ ಬಸ್ ಗಳು ಸಂಚರಿಸಲಿವೆ.
ಪ್ರಯಾಣಿಕರು ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಪ್ರತಿ ಬಸ್ ನಲ್ಲೂ ಸ್ಯಾನಿಟೈಸರ್ ಇಡಲಾಗುತ್ತದೆ. ಅಲ್ಲದೇ ಒಂದು ಬಾಗಿಲ ಮೂಲಕ ಬಸ್ ಹತ್ತಲು ಅವಕಾಶವಿದ್ದರೆ ಮತ್ತೊಂದು ಬಾಗಿಲಿನ ಮೂಲಕ ಇಳಿಯಬೇಕಾಗುತ್ತದೆ.