ಬೆಂಗಳೂರಿನ ಪಾದರಾಯನಪುರದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಐದು ಮಂದಿ ದುಷ್ಕರ್ಮಿಗಳು ಸ್ಥಳೀಯರನ್ನು ಪ್ರಚೋದಿಸಿ ಈ ಗಲಭೆಗೆ ಕಾರಣಕರ್ತರಾಗಿದ್ದಾರೆಂದು ಹೇಳಲಾಗಿದೆ.
ವಜೀರ್, ಇರ್ಫಾನ್, ಕಬೀರ್, ಇರ್ಷಾದ್ ಅಹ್ಮದ್ ಹಾಗೂ ಫೈರೋಜಾ ಆಲಿಯಾಸ್ ಲೇಡಿ ಡಾನ್ ಈ ಪ್ರಮುಖ ಆರೋಪಿಗಳಾಗಿದ್ದು, ಪಾದರಾಯನಪುರ ಸೀಲ್ ಡೌನ್ ಆದ ಕಾರಣಕ್ಕೆ ತಮಗೆ ಅಗತ್ಯ ವಸ್ತುಗಳು ಸಿಗದಿದ್ದರಿಂದ ಆಕ್ರೋಶಗೊಂಡಿದ್ದ ಸ್ಥಳೀಯರನ್ನು ಎತ್ತಿಕಟ್ಟಿ ಇಂತಹ ಹೇಯ ಕೃತ್ಯ ನಡೆಯುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾದರಾಯನಪುರವನ್ನು ಸೀಲ್ ಡೌನ್ ಮಾಡಿದ ಬಳಿಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳಲಾಗಿತ್ತಾದರೂ ಆ ಕಾರ್ಯ ನಡೆದಿರಲಿಲ್ಲ. ಅಲ್ಲದೆ ಸ್ಥಳೀಯರು ಖರೀದಿಗಾಗಿ ಹೊರಬರಲು ಮುಂದಾದ ವೇಳೆ ಪೊಲೀಸರ ಜತೆ ವಾಗ್ವಾದ ನಡೆದಿತ್ತು. ಜೊತೆಗೆ ಮೇಲ್ಕಂಡ ಪ್ರಮುಖ ಆರೋಪಿಗಳು ತಮ್ಮ ಕಾನೂನುಬಾಹಿರ ಚಟುವಟಿಕೆ ನಡೆಸಲು ಸೀಲ್ ಡೌನ್ ಅಡ್ಡಿ ಆಗಿದ್ದರಿಂದ ಸ್ಥಳೀಯರಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನು ಬಳಸಿಕೊಂಡು ಗಲಭೆಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಲಾಗಿದೆ.