ಕೊರೊನಾ ಸೋಂಕು ನಿಯಂತ್ರಣಕ್ಕೆ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಮೇ.3ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಲಾಕ್ ಡೌನ್ ನಂತ್ರ ಕೇಂದ್ರ ಸರ್ಕಾರ ಯಾವೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ಆದ್ರೆ ಈಗಾಗ್ಲೇ ಕೆಲವು ನಿಯಮಗಳನ್ನು ಕೇಂದ್ರ ಜಾರಿಗೆ ತರ್ತಿದೆ.
ಲಾಕ್ ಡೌನ್ ಜಾರಿ ವೇಳೆ ಕೇಂದ್ರ ಸರ್ಕಾರ ದೇಶವನ್ನು ಮೂರು ವಲಯಗಳಾಗಿ ವಿಂಗಡಿಸಿತ್ತು. ಹಸಿರು, ಕೇಸರಿ ಹಾಗೂ ಕೆಂಪು ವಲಯಗಳಾಗಿ ವಿಂಗಡಿಸಿತ್ತು. ಈಗ ಈ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಮೆಟ್ರೋ ನಗರಗಳನ್ನು ಸರ್ಕಾರ ಕೆಂಪು ವಲಯದಲ್ಲಿಯೇ ಇಟ್ಟಿದೆ.
ಕೇಂದ್ರ ಸದ್ಯ ಕೆಲ ಪ್ರದೇಶಗಳನ್ನು ಕೆಂಪು ವಲಯವಾಗಿ ಗುರುತಿಸಿದ್ದು, ಮೇ 3ರ ನಂತ್ರವೂ ಇಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ ಎನ್ನಲಾಗ್ತಿದೆ. ಮೇ 3ರನಂತ್ರ ಬೇರೆ ಪ್ರದೇಶಗಳಿಗೆ ಸಿಗುವ ರಿಯಾಯಿತಿ ಈ ಪ್ರದೇಶಕ್ಕೆ ಸಿಗುವುದಿಲ್ಲ ಎನ್ನಲಾಗಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್ ಕೆಂಪು ವಲಯದಲ್ಲಿ ಉಳಿಯಲಿದ್ದು, ಈ ಪ್ರದೇಶದ ಜನರು ಲಾಕ್ಡೌನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕು. ಇದಲ್ಲದೆ ರಾಜ್ಯಗಳಲ್ಲಿ ಇನ್ನೂ ಕೆಲ ಪ್ರದೇಶಗಳನ್ನು ಕೆಂಪು ವಲಯಗಳಾಗಿ ಗುರುತಿಸಿ ಅದ್ರ ಪಟ್ಟಿ ಬಿಡುಗಡೆ ಮಾಡಿದೆ.