ಬೆಂಗಳೂರು: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಪ್ರತಿ ವರ್ಷವೂ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ. ಅಕ್ಟೋಬರ್ 31 ರಂದು ಶಿಕ್ಷಕರು ಶಾಲಾ ಹಂತದಲ್ಲಿ ಪ್ರಾರ್ಥನಾ ವೇಳೆಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರು ದೇಶದ ಏಕೀಕರಣಕ್ಕಾಗಿ, ದೇಶವನ್ನು ಬಲಪಡಿಸಲು, ಭದ್ರತೆಯನ್ನು ಕಾಪಾಡಿಕೊಳ್ಳಲು ತಮ್ಮನ್ನು ತಾವು ಸಮರ್ಪಿಸಿಕೊಂಡಿರುವುದನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳೊಂದಿಗೆ ಪ್ರತಿಜ್ಞೆ ತೆಗೆದುಕೊಳ್ಳುವುದು.
ಪಟೇಲ್ ಅವರ ದೂರ ದೃಷ್ಟಿ, ದೇಶದ ಏಕತೆಯ ಭಾವನೆಗಳು, ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಬರವಣಿಗೆ, ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಂಡು ಜಾಥಾ ಮೂಲಕ ಅವರ ಸಂದೇಶವನ್ನು ದೇಶವಾಸಿಗಳಲ್ಲಿ ಹರಡುವ ಮೂಲಕ ಶಾಲಾ ಮಕ್ಕಳು ಪಟೇಲರ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವಂತೆ ತಿಳಿಸಲಾಗಿದೆ.
ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞೆ
‘ನಾನು ಸತ್ಯ ನಿಷ್ಠೆಯಿಂದ ಪ್ರತಿಜ್ಞೆ ಮಾಡುವುದೇನೆಂದರೆ, ನಾನು ರಾಷ್ಟ್ರದ ಐಕ್ಯತೆ, ಅಖಂಡತೆ ಮತ್ತು ಸುರಕ್ಷತೆಯನ್ನು ಕಾಪಾಡಲು ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ’ ಎಂದು ಮಕ್ಕಳಿಂದ ಪ್ರತಿಜ್ಞೆ ಮಾಡಿಸುವುದು.
ಉಪನಿರ್ದೇಶಕರು ಶಾಲಾ ಹಂತದಲ್ಲಿ ಕಾರ್ಯಕ್ರಮದ ಅನುಷ್ಠಾನಗೊಳಿಸಿದ ಬಗ್ಗೆ ಫೋಟೋ ಸಹಿತ ಮಾಹಿತಿಯನ್ನು ರಾಜ್ಯ ಕಚೇರಿಯ ಇ-ಮೇಲ್ innovativessk2022@gmail.com ವಿಳಾಸಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.