alex Certify ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ದೃಶ್ಯ ವೀಕ್ಷಿಸಿ ‘ಭೂತಯ್ಯನ ಮಗ ಅಯ್ಯು’ ನೆನಪಿಸಿಕೊಂಡ ಕನ್ನಡಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ದೃಶ್ಯ ವೀಕ್ಷಿಸಿ ‘ಭೂತಯ್ಯನ ಮಗ ಅಯ್ಯು’ ನೆನಪಿಸಿಕೊಂಡ ಕನ್ನಡಿಗರು

ನೆರೆರಾಷ್ಟ್ರ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಕಳೆದ ಒಂದು ದಶಕದಿಂದ ಆ ದೇಶವನ್ನಾಳಿದ್ದ ರಾಜಪಕ್ಸೆ ಕುಟುಂಬ ತಮ್ಮ ವೈಯಕ್ತಿಕ ಲಾಭಕ್ಕೆ ಆಡಳಿತವನ್ನು ಬಳಸಿಕೊಂಡು ದೇಶವನ್ನು ಅಧೋಗತಿಗೆ ಇಳಿಸಿದೆ. ಒಂದು ಕಾಲದಲ್ಲಿ ರಾಜಪಕ್ಸೆ ಕುಟುಂಬವನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದ ಜನರೇ ಇಂದು ತಮ್ಮ ಇಂದಿನ ಪರಿಸ್ಥಿತಿಯನ್ನು ನೆನೆದು ಹಿಡಿಶಾಪ ಹಾಕುತ್ತಿದ್ದಾರೆ.

ಶನಿವಾರದಂದು ರೊಚ್ಚಿಗೆದ್ದ ಜನ ಶ್ರೀಲಂಕಾದ ಹಾಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿವಾಸಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಸಿಕ್ಕಸಿಕ್ಕ ವಾಹನಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು ಅಧ್ಯಕ್ಷರ ವೈಭವೋಪೇತ ನಿವಾಸವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ವಿಚಾರವನ್ನು ಮೊದಲೇ ತಿಳಿದಿದ್ದ ಗೊಟಬಯ ರಾಜಪಕ್ಸೆ ಪರಾರಿಯಾಗಿದ್ದು, ಆತನ ನಿವಾಸದ ಐಷಾರಾಮಿ ಸೌಲಭ್ಯಗಳನ್ನು ನೋಡಿ ಜನ ದಂಗಾಗಿದ್ದಾರೆ.

ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಬೀಡುಬಿಟ್ಟಿರುವ ಪ್ರತಿಭಟನಾಕಾರರು ಈಗ ಅಲ್ಲಿನ ವೈಭವೋಪೇತ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿರುವುದು, ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವುದು, ಐಷಾರಾಮಿ ಕುರ್ಚಿಗಳಲ್ಲಿ ಕುಳಿತುಕೊಂಡು ಫೋಟೋ ತೆಗೆಸಿಕೊಂಡಿರುವುದಲ್ಲದೆ ಅಡುಗೆ ಮನೆಗೆ ನುಗ್ಗಿ ಸ್ವತಃ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾರೆ.

ಈ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವುಗಳನ್ನು ನೋಡಿದ ಕನ್ನಡಿಗರು ಎಸ್.‌ ಸಿದ್ದಲಿಂಗಯ್ಯ ನಿರ್ದೇಶನದ ವಿಷ್ಣುವರ್ಧನ್, ಲೋಕೇಶ್, ಎಂ.ಪಿ. ಶಂಕರ್, ಬಾಲಕೃಷ್ಣ ಅಭಿನಯದ ‘ಭೂತಯ್ಯನ ಮಗ ಅಯ್ಯು’ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಬಡವರ ರಕ್ತ ಹೀರಿ ಅಪಾರ ಸಂಪತ್ತು ಸಂಪಾದಿಸಿದ್ದ ಅಯ್ಯು (ಎಂ.ಪಿ. ಶಂಕರ್) ನಿವಾಸಕ್ಕೆ ನುಗ್ಗುವ ಗ್ರಾಮದ ಜನರು ಅಲ್ಲಿರುವ ವಸ್ತುಗಳನ್ನು ದೋಚುತ್ತಾರೆ. ಅದರಲ್ಲೂ ಉಪ್ಪಿನಕಾಯಿ ಪ್ರಿಯರಾದ ಲೋಕನಾಥ್ ಅದನ್ನು ತಿನ್ನುವ ದೃಶ್ಯ ಎಲ್ಲರ ಕಣ್ಣಿಗೆ ಕಟ್ಟುವಂತಿತ್ತು. ಇದೀಗ ಶ್ರೀಲಂಕಾದ ದೃಶ್ಯಗಳನ್ನು ಇದಕ್ಕೆ ಸಮೀಕರಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...