ಅದೆಷ್ಟೋ ಬಾರಿ ಚಿಕ್ಕ ಮಕ್ಕಳು ಬೆಳಿಗ್ಗೆ ಎದ್ದೊಡನೆ ಅಮ್ಮಾ ನನಗೆ ಎಷ್ಟು ಒಳ್ಳೆಯ ಕನಸು ಬಿತ್ತು. ನಾನು ಕನಸಿನಲ್ಲಿ ಹಾಗೇ ಮಾಡ್ತಾ ಇದ್ದೆ, ಹೀಗೆ ಮಾಡ್ತಾ ಇದ್ದೆ ಅಂತ ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವೊಮ್ಮೆ ಕೆಟ್ಟ ಕನಸುಗಳು ಬಿದ್ದು ಮಗು ಅಳುವುದೂ ಉಂಟು. ಆಗ ಮನೆಯ ಹಿರಿಯರು ದೃಷ್ಟಿ ತೆಗೆಸುವುದು, ತಾಯತ ಕಟ್ಟಿಸುವುದು ಮುಂತಾದವನ್ನು ಮಾಡ್ತಾರೆ. ಈ ಕನಸು ಚಿಕ್ಕವರು ದೊಡ್ಡವರೆನ್ನದೆ ಎಲ್ಲರನ್ನೂ ಕಾಡುತ್ತದೆ. ನಮ್ಮ ಬದುಕಿಗೆ ಕನಸಿನ ಜೊತೆ ನೇರ ಸಂಬಂಧ ಇಲ್ಲವಾದರೂ ಕೆಲವೊಮ್ಮೆ ಇಂತಹ ಸ್ವಪ್ನಗಳು ನಮಗೆ ಎಚ್ಚರಿಕೆಯ ಗಂಟೆಯಾಗುವುದು ಸುಳ್ಳಲ್ಲ.
ಸ್ವಪ್ನಶಾಸ್ತ್ರದ ಪ್ರಕಾರ ನಿಮಗೆ ಕನಸಿನಲ್ಲಿ ಧನ ಹಾನಿ, ಮೇಲಿನಿಂದ ಬೀಳುವುದು, ಕೂದಲು ಕತ್ತರಿಸುವುದು ಮುಂತಾದವು ಕಾಣಿಸಿದರೆ ಅದು ಯಾವುದೋ ಕೆಟ್ಟ ಘಟನೆ ನಡೆಯುವುದರ ಮುನ್ಸೂಚನೆಯಾಗಿದೆ. ಇದರ ಹೊರತಾಗಿ ಹಲ್ಲು ಬೀಳುವುದು, ನದಿಯ ನೀರಿಗೆ ಕಟ್ಟಿರುವ ಅಣೆಕಟ್ಟು, ಪ್ರವಾಹ, ಸೂರ್ಯಾಸ್ತ ಇವುಗಳು ನಿಮ್ಮ ಕನಸಿನಲ್ಲಿ ಕಾಣಿಸಿದರೂ ಅದು ಅಪಶಕುನದ ಸಂಕೇತವಾಗಿದೆ.
ಇದಲ್ಲದೇ ಕುದುರೆಯ ಮೇಲಿಂದ ಬೀಳುವುದು, ಮುಚ್ಚಿರುವ ಚರಂಡಿ, ಬಾವಿ, ದೋಣಿಯಲ್ಲಿ ಕೂರುವುದು, ಬೆಕ್ಕು, ಗೂಬೆ, ಒಣಗಿದ ಕಾಡು, ನೀವು ಸಹಿ ಮಾಡುತ್ತಿರುವ ಹಾಗೆ ಕಾಣಿಸುವುದು.. ಮುಂತಾದವೆಲ್ಲ ಸ್ವಪ್ನದಲ್ಲಿ ಕಾಣಿಸಿದರೂ ಅಶುಭದ ಸಂಕೇತವಾಗಿದೆ. ಇದರಿಂದ ಭವಿಷ್ಯದಲ್ಲಿ ಕಷ್ಟಗಳು ಎದುರಾಗುತ್ತವೆ.
ಕನಸಿನಲ್ಲಿ ಕೋಗಿಲೆ, ಚಾಕುವಿನಿಂದ ಕೊಲ್ಲುವುದು, ಕತ್ತರಿ ಉಪಯೋಗಿಸುವುದು ಅಥವಾ ಕೆನ್ನೆಗೆ ಹೊಡೆಯುವುದು ಕಾಣಿಸಿದರೆ, ಅದರಿಂದ ನಿಮ್ಮ ದಾಂಪತ್ಯ ಜೀವನ ಹಾಳಾಗಬಹುದು.
ಕನಸಿನಲ್ಲಿ ನೀವು ನಕ್ಷತ್ರ ಮುಟ್ಟಿದ ಹಾಗೆ ಕಾಣಿಸಿದರೆ ನೀವು ಕೂಡ ನಕ್ಷತ್ರದಂತೆ ಹೊಳೆಯುತ್ತೀರಿ. ನಿಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂದರ್ಥ.
ನಿಮಗೆ ಕೆಟ್ಟ ಕನಸು ಬಿದ್ದಲ್ಲಿ ಬೆಳಿಗ್ಗೆ ಎದ್ದೊಡನೆ ಶಿವನ ಪೂಜೆ ಮಾಡಿ ರುದ್ರಾಭಿಷೇಕ ಮಾಡಿ ನಮ್ಮನ್ನು ರಕ್ಷಿಸುವಂತೆ ಪ್ರಾರ್ಥನೆ ಮಾಡಿಕೊಳ್ಳಿ. ಪೂಜೆಯ ಜೊತೆಗೆ ದುರ್ಗಾಸಪ್ತಶತಿಯನ್ನು ಓದಿ. ಇವುಗಳನ್ನು ಮಾಡಿದ ಮೇಲೆಯೂ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗದಿದ್ದಲ್ಲಿ ಒಮ್ಮೆ ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.’