ಬೆಂಗಳೂರು : ನಂದಿನಿ ಹಾಲಿನ ದರ 3 ರೂ ಏರಿಕೆಯಾಗಿದ್ದು, ಆ.1 ರಿಂದ ಜಾರಿಗೆ ಬರಲಿದೆ. ಈ ಕುರಿತು ನೀಡಿದ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಾಲಿನ ದರ ರೂ. 3 ಹೆಚ್ಚಿಸುವ ನಿರ್ಧಾರ ಕೆಎಂಎಫ್ ತೆಗೆದುಕೊಂಡಿದೆ, ನನ್ನನ್ನು ಸಭೆಗೆ ಆಹ್ವಾನಿಸಿದ್ದರು, ನಾನು ಹೋಗಿ ಬಂದೆ. ಒಕ್ಕೂಟ ತೆಗೆದುಕೊಂಡಿರುವ ನಿರ್ಣಯವನ್ನು ಸಚಿವ ಸಂಪುಟದ ಗಮನಕ್ಕೆ ತರುವ ಕೆಲಸ ಮಾತ್ರ ನಾನು ಮಾಡಿದ್ದು ಎಂದರು. ಕರ್ನಾಟಕದಲ್ಲಿ ಈಗ ಹಾಲಿನ ದರ ರೂ. 39/ ಲೀಟರ್ ಇದೆ. ಹೆಚ್ಚಳದ ಬಳಿಕ ಅದು ರೂ. 42 ಆಗುತ್ತದೆ. ಅಷ್ಟಾಗಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದರು.
ನಂದಿನಿ ಹಾಲಿನ ದರ 3 ರೂ. ಏರಿಕೆಗೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಅಸ್ತು ಎಂದಿದ್ದು, ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು, ಇದಕ್ಕೆ ನಿನ್ನೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರಲಿದೆ. ಕೆಎಂಎಫ್ ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು, ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಿ 5 ರೂಪಾಯಿ ಬದಲಿಗೆ 3 ರೂ. ಹೆಚ್ಚಳಕ್ಕೆ ಸರ್ಕಾರ ಸಮ್ಮತಿ ನೀಡಿದೆ. ಹಾಲು ಒಕ್ಕೂಟದ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ ಎಂದು ಹೇಳಲಾಗಿದೆ.