ಮಧುವಣಗಿತ್ತಿಯಂತೆ ತಯಾರಾಗಿದ್ದ ಯುವತಿಯೊಬ್ಬಳು ವರನ ಮನೆಯ ಎದುರು ಧರಣಿ ನಡೆಸಿದ ಘಟನೆಯು ಓಡಿಶಾದ ಬರ್ಹಾಮ್ಪುರದಲ್ಲಿ ಸಂಭವಿಸಿದೆ.
ವಧು ಡಿಂಪಲ್ ದಾಶ್ ಹಾಗೂ ವರ ಸುಮೀತ್ ಸಾಹು ಕೆಲ ಸಮಯದ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದರು. ಇದಾದ ಬಳಿಕ ಎರಡೂ ಕುಟುಂಬದವರೂ ಶಾಸ್ತ್ರೋಕ್ತವಾಗಿ ಡಿಂಪಲ್ ಹಾಗೂ ಸುಮೀತ್ ಮದುವೆ ನೆರವೇರಿಸುವ ಬಗ್ಗೆ ಪ್ಲಾನ್ ಮಾಡಿದ್ದರು. ಅದೇ ರೀತಿ ದಿನಾಂಕವನ್ನೂ ನಿಗದಿ ಮಾಡಿದ್ದರು.
ನಿಗದಿತ ದಿನಾಂಕದಂದು ಡಿಂಪಲ್ ಹಾಗೂ ಆಕೆಯ ಕುಟುಂಬಸ್ಥರು ಮದುವೆ ನಡೆಯಬೇಕಿದ್ದ ಸ್ಥಳ ತಲುಪಿದ್ದಾರೆ. ಆದರೆ ಅಲ್ಲಿ ವರ ಹಾಗೂ ಆತನ ಕುಟುಂಬಸ್ಥರ ಸುಳಿವು ಕೂಡ ಇರಲಿಲ್ಲ. ನಿರಂತರವಾಗಿ ಕರೆ ಮಾಡಿದರೂ ಸಹ ಯಾರೊಬ್ಬರೂ ಕರೆಯನ್ನು ಸ್ವೀಕರಿಸಿರಲಿಲ್ಲ.
ಮಂಟಪದಲ್ಲಿ ಕಾದು ಕಾದು ಸುಸ್ತಾದ ಡಿಂಪಲ್ ಹಾಗೂ ಆಕೆಯ ತಾಯಿ ಸೀದಾ ವರನ ನಿವಾಸಕ್ಕೆ ತೆರಳಿ ಧರಣಿ ನಡೆಸಲು ತೀರ್ಮಾನಿಸಿದ್ದರು. ಹಾಗೂ ಅದರಂತೆಯೇ ವರನ ನಿವಾಸಕ್ಕೆ ತೆರಳಿ ಆತನ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ವಧು ಡಿಂಪಲ್, ನಾವು ಕಳೆದ ವರ್ಷ ಸೆಪ್ಟೆಂಬರ್ 7ರಂದು ರಿಜಿಸ್ಟರ್ ಮದುವೆ ಆಗಿದ್ದೆವು. ಮದುವೆಯಾದ ಮೊದಲ ದಿನದಿಂದಲೂ ನನಗೆ ಅತ್ತೆ ಮಾವ ಕಿರುಕುಳ ನೀಡುತ್ತಿದ್ದಾರೆ. ಒಮ್ಮೆಯಂತೂ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದರು. ಮೊದಲು ಪತಿ ನನ್ನ ಪರವಾಗಿ ನಿಲ್ಲುತಿದ್ದರು. ಆದರೆ ಕೆಲವು ತಿಂಗಳು ಕಳೆದ ಬಳಿಕ ಅವರೂ ಪೋಷಕರ ಮಾತಿನಂತೆ ವರ್ತಿಸಲು ಶುರು ಮಾಡಿದರು. ಇದಾದ ಬಳಿಕ ನಾನು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹೀಗಾಗಿ ನನ್ನ ತವರು ಮನೆಗೆ ಆಗಮಿಸಿದ ಮಾವ ಹಳೆಯದ್ದನ್ನು ಮರೆತು ಹೊಸ ಜೀವನ ಆರಂಭಿಸೋಣ. ನಾವು ಶಾಸ್ತ್ರೋಕ್ತವಾಗಿ ಇವರ ಮದುವೆ ನೆರವೇರಿಸೋಣ ಎಂದು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
ಡಿಂಪಲ್ ತಾಯಿ ಕೂಡ ಇದೇ ವಿಚಾರವಾಗಿ ಮಾತನಾಡಿ, ಸುಮೀತ್ ನನ್ನ ಪುತ್ರಿಯ ಮೇಲೆ ಸಾಕಷ್ಟು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈಗ ನೋಡಿದರೆ ಮದುವೆಗೆ ಕೂಡ ಬಂದಿಲ್ಲ. ಇವರು ನನ್ನ ಮಗಳನ್ನು ವಸ್ತುವಿನಂತೆ ಬಳಸಿ ಬಿಸಾಡಿದ್ದಾರೆ ಎಂದು ಅಳಲು ತೋಡಿಕೊಂಡರು. ಈ ಸಂಬಂಧ ವರನ ಕುಟುಂಬಸ್ಥರು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.