ಹೊಸದಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ವೇ ಪ್ರಯಾಣಿಕರಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಕಳೆದ ಐದು ತಿಂಗಳ ಅವಧಿಯಲ್ಲಿ ಎಕ್ಸ್ ಪ್ರೆಸ್ವೇನಲ್ಲಿ 55 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ವರ್ಷದ ಜನವರಿಯಿಂದ ಮೇ ವರೆಗೆ 570 ಅಪಘಾತಗಳು ವರದಿಯಾಗಿವೆ. ಇದರಲ್ಲಿ 55 ಜನರು ಸಾವನ್ನಪ್ಪಿದ್ದಾರೆ ಮತ್ತು 52 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 279 ಜನರಿಗೆ ಸಣ್ಣ ಗಾಯಗಳು ಮತ್ತು 184 ಜನರು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪಘಾತಗಳಿಗೆ ಮುಖ್ಯವಾಗಿ ವಾಹನ ಚಾಲಕರ ಅತಿವೇಗ ಮತ್ತು ನಿರ್ಲಕ್ಷ್ಯ ಕಾರಣವಾಗಿದೆ. 118 ಕಿಮೀ ಎಕ್ಸ್ ಪ್ರೆಸ್ವೇಯಲ್ಲಿ 55 ಕಿಮೀ ವ್ಯಾಪ್ತಿಯು ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಎಕ್ಸ್ ಪ್ರೆಸ್ವೇ ನಿರ್ಮಾಣದಿಂದ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ತೀವ್ರವಾಗಿ ಕಡಿತಗೊಂಡಿರುವುದು ವಾಹನ ಸವಾರರಲ್ಲಿ ಸಂತಸ ಮೂಡಿಸಿದೆಯಾದರೂ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಸರ್ಕಾರವು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಎಕ್ಸ್ ಪ್ರೆಸ್ವೇಯನ್ನು ನಿರ್ಮಿಸಿದೆ. ಆದಾಗ್ಯೂ ಎಕ್ಸ್ ಪ್ರೆಸ್ವೇಯ ಕೆಲವು ಸ್ಟ್ರೆಚ್ಗಳಲ್ಲಿ ಅವೈಜ್ಞಾನಿಕ ನಿರ್ಮಾಣ ಮತ್ತು ತಪ್ಪಾದ ಜೋಡಣೆಯು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೆ, ವಾಹನ ಚಾಲಕರ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯು ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಇದಕ್ಕೂ ಮೊದಲು ಎಕ್ಸ್ ಪ್ರೆಸ್ವೇ ಕಳೆದ ವರ್ಷವೂ ಹಲವಾರು ಅಪಘಾತಗಳಿಗೆ ಸಾಕ್ಷಿಯಾಗಿತ್ತು. ರಸ್ತೆ ವಿಸ್ತರಣೆ ಇನ್ನೂ ಪೂರ್ಣಗೊಳ್ಳದ ಕಾರಣ ಎನ್ಎಚ್ಎಐ ಅಧಿಕಾರಿಗಳು ಬೆಂಗಳೂರು ಮತ್ತು ಮಂಡ್ಯ ನಡುವೆ ವಾಹನಗಳನ್ನು ಓಡಿಸಲು ಅನುವು ಮಾಡಿಕೊಟ್ಟಿದ್ದರು. ವರದಿಗಳ ಪ್ರಕಾರ ಜುಲೈನಿಂದ ಡಿಸೆಂಬರ್ 2022 ರವರೆಗೆ 77 ಅಪಘಾತಗಳು ವರದಿಯಾಗಿವೆ. ಇದರಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಮತ್ತು 67 ಜನರು ಗಾಯಗೊಂಡಿದ್ದಾರೆ.