ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಜನಜೀವನವನ್ನು ಕಂಗೆಡಿಸಿದೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಹುತೇಕ ಕಾರ್ಯಚಟುವಟಿಕೆಗಳು ಸ್ತಬ್ಧವಾಗಿದ್ದು, ಸಾರ್ವಜನಿಕ ಸಮಾರಂಭ, ಮದುವೆ ಮೊದಲಾದವುಗಳ ಮೇಲೂ ಇದು ಪರಿಣಾಮ ಬೀರಿದೆ.
ಮದುವೆ ಸಮಾರಂಭಗಳಲ್ಲಿ ಇಂತಿಷ್ಟೇ ಜನ ಭಾಗವಹಿಸಬೇಕೆಂದು ಸರ್ಕಾರದ ಸೂಚನೆ ಇರುವುದರಿಂದ ಮದುವೆಗಳು ಈಗ ಮನೆಯಲ್ಲೇ ನೆರವೇರುತ್ತಿದೆ. ಹೀಗೆ ನಡೆದ ಮದುವೆಯೊಂದಕ್ಕೆ ಸ್ವತಃ ತಂದೆ – ತಾಯಿಗಳೇ ಹಾಜರಾಗಲು ಸಾಧ್ಯವಾಗದ ಕಾರಣ ಟಿವಿಯಲ್ಲಿ ಮಗನ ಮದುವೆ ವೀಕ್ಷಿಸಿ ತಾಳಿ ಕಟ್ಟುವ ವೇಳೆ ಟಿವಿ ಮೇಲೆ ಅಕ್ಷತೆ ಹಾಕಿದ್ದಾರೆ.
ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ಲಕ್ಷ್ಮೀನಾರಾಯಣ ಜೋಯಿಸ್ ಎಂಬವರ ಪುತ್ರ ಶಿವಶ್ಚಂದ್ರ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಅವರ ವಿವಾಹ ಮೇ 13 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು.
ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿದ್ದು, ಲಗ್ನ ಪತ್ರಿಕೆಯನ್ನು ಬಂಧುಮಿತ್ರರಿಗೆ ವಿತರಿಸಲಾಗಿತ್ತು. ಆದರೆ ಇದರ ಮಧ್ಯೆ ಲಾಕ್ಡೌನ್ ಜಾರಿಯಲ್ಲಿರುವುದರ ಜೊತೆಗೆ ಮದುವೆ ಸಮಾರಂಭಕ್ಕೆ ಸರ್ಕಾರದ ಮಾರ್ಗಸೂಚಿ ಇದ್ದ ಕಾರಣ ವಧು ಕಾವ್ಯಶ್ರೀ ಅವರ ನಿವಾಸದಲ್ಲಿ ಈ ಮದುವೆ ನೆರವೇರಿದೆ.
ಈ ಮದುವೆಗೆ ತಂದೆ-ತಾಯಿ ತೆರಳಲು ಸಾಧ್ಯವಾಗದ ಕಾರಣ ವಿಡಿಯೋ ಕಾಲ್ ಮೂಲಕ ಮನೆಯಲ್ಲಿ ಕುಳಿತು ಟಿವಿಯಲ್ಲಿ ಮದುವೆ ಸಮಾರಂಭವನ್ನು ವೀಕ್ಷಿಸಿದ್ದಾರೆ.