ಬೆಂಗಳೂರು: ಲಾಕ್ಡೌನ್ ಅವಧಿ ಮುಗಿದ ನಂತರ ಬಸ್ ಸಂಚಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಸೂಚನೆ ನೀಡಲಾಗುವುದು. ಈಗಾಗಲೇ ಕೆಲವು ವಲಯಗಳಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರನ್ನು ಸ್ವಂತ ಊರುಗಳಿಗೆ ಕರೆದುಕೊಂಡು ಹೋಗಲು ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಶೇಕಡ 50 ರಷ್ಟು ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಖಾಸಗಿ ಬಸ್ ಪ್ರಯಾಣ ದರ ವಿಮಾನ ಕಿಂತಲು ದುಬಾರಿಯಾಗುವ ಸಾಧ್ಯತೆಯಿದ್ದು ಪ್ರಯಾಣಿಕರಿಗೆ ಭಾರಿ ಹೊರೆಯಾಗಬಹುದು ಎಂದು ಹೇಳಲಾಗಿದೆ.
ಸಾಮಾಜಿಕ ಅಂತರ ಕಾಪಾಡಬೇಕಿರುವುದರಿಂದ ಬಸ್ ಗಳಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಕರೆದೊಯ್ಯಬೇಕಿರುವುದರಿಂದ ಪ್ರಯಾಣ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ ನಲ್ಲಿ 900 ರೂಪಾಯಿ ವರೆಗೂ ಟಿಕೆಟ್ ದರ ಇದ್ದು, ಈಗ 3 ಸಾವಿರ ರೂಪಾಯಿವರೆಗೂ ಟಿಕೆಟ್ ದರ ಇದೆ.
ಲಾಕ್ಡೌನ್ ತೆರವುಗೊಳಿಸಿದರೂ ಸದ್ಯಕ್ಕೆ ವಿಮಾನ ಮತ್ತು ರೈಲು ಸಂಚಾರ ಆರಂಭವಾಗುವುದು ಅನುಮಾನವೆನ್ನಲಾಗಿದೆ. ಖಾಸಗಿ ಬಸ್ ಟ್ರಾವೆಲ್ ಏಜೆನ್ಸಿಗಳು ಮುಂಗಡ ಟಿಕೆಟ್ ಬುಕ್ಕಿಂಗ್ ಶುರುಮಾಡಿದ್ದು, ದುಬಾರಿ ದರ ವಿಧಿಸಲು ಮುಂದಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಕೆಲವು ವಲಯಗಳಲ್ಲಿ ಷರತ್ತಿಗೆ ಒಳಪಟ್ಟು ಬಸ್ ಸಂಚಾರಕ್ಕೆ ಅವಕಾಶ ನೀಡುವ ಚಿಂತನೆ ಇದೆ. ಹೀಗಾಗಿ ಟಿಕೆಟ್ ಬುಕಿಂಗ್ ಶುರುವಾಗಿದ್ದು ಬೆಂಗಳೂರಿನಿಂದ ವಿವಿಧ ಕಡೆಗಳಿಗೆ ತೆರಳಲು ಟಿಕೆಟ್ ಬುಕಿಂಗ್ ದರ ವಿಮಾನ ಪ್ರಯಾಣ ದರಕ್ಕಿಂತ ಜಾ್ತಿ ಇದೆ.
ಬೆಂಗಳೂರಿನಿಂದ ಮುಂಬೈಗೆ ಸಾಮಾನ್ಯ ದಿನಗಳಲ್ಲಿ 2000 ರೂಪಾಯಿ ದರ ಇದ್ದರೆ ಪ್ರಸ್ತುತ 8,500 ರೂ.ದರ ಇದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯ ದಿನಗಳಲ್ಲಿ 950 ರೂಪಾಯಿ ಟಿಕೆಟ್ ದರ ಇದ್ದರೆ ಈಗ 8,500 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.