ಬೆಂಗಳೂರು: ಆಟೋ, ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿ ಸಹಾಯಧನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ.
ಚಾಲನಾ ಅನುಜ್ಞಾ ಪತ್ರ, ಬ್ಯಾಡ್ಜ್ ಹೊಂದಿರುವ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಮಾರ್ಚ್ 1 ಕ್ಕೆ ಚಾಲ್ತಿಯಲ್ಲಿರುವ ಅನುಜ್ಞಾ ಪತ್ರದ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ವಾಹನ ನೋಂದಣಿ ಸಂಖ್ಯೆ ನೀಡಬೇಕು. ಪೋರ್ಟಲ್ ನಲ್ಲಿ ಎಲ್ಲ ವಿವರಗಳನ್ನು ನೀಡಬೇಕಿದೆ.
ಆದಾಯ ಕಳೆದುಕೊಂಡಿರುವ ಬಗ್ಗೆ ಸೆಲ್ಫ್ ಡಿಕ್ಲೇರೇಷನ್ ಕೊಡಬೇಕು. ಸೇವಾ ಸಿಂಧು ಆಪ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ ಎಂದು ಕರಡು ಮಾರ್ಗಸೂಚಿಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದೆ. ಸರ್ಕಾರದಿಂದ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ ಎಂದು ಹೇಳಲಾಗಿದೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರು ಸೇರಿದಂತೆ ಹಲವು ಶ್ರಮಿಕ ವರ್ಗದವರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರು ಈ ಸಹಾಯಧನ ಪಡೆಯಲು ಸಾರಿಗೆ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ ಎನ್ನಲಾಗಿದೆ.