ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ಬಡವರ ಬದುಕನ್ನು ಅತಂತ್ರವಾಗಿಸಿದೆ. ಕೆಲಸವಿಲ್ಲದೆ ಬರಿಗೈಯಲ್ಲಿರುವ ಬಡ ಜನತೆ ದಾನಿಗಳು ನೀಡುವ ಆಹಾರ ಸಾಮಗ್ರಿಯಿಂದ ದಿನ ದೂಡುತ್ತಿದ್ದಾರೆ.
ಹೀಗೆ ಹಣವಿಲ್ಲದೇ ಇದ್ದುದರಿಂದ ಮಹಿಳೆಯೊಬ್ಬಳು ಕೇವಲ ಇಪ್ಪತ್ತು ರೂಪಾಯಿ ಆಸೆಗಾಗಿ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಕಬ್ಬು ಕಟಾವು ತಂಡ ಏಳು ತಿಂಗಳ ಹಿಂದೆ ಜಾಗನೂರು ಗ್ರಾಮದಲ್ಲಿ ನೆಲೆಸಿದ್ದು, ಲಾಕ್ ಡೌನ್ ಜಾರಿಯಾದ ಕಾರಣ ಊರಿಗೆ ತೆರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದುಕೊಂಡಿತ್ತು.
ಇದರ ಮಧ್ಯೆ ದಿವ್ಯಾ ಎಂಬ 4 ವರ್ಷದ ಬಾಲಕಿ 20 ರೂಪಾಯಿ ನೋಟು ಹಿಡಿದುಕೊಂಡು ಚಾಕಲೇಟ್ ತರಲು ಹೊರ ಬಂದಿದ್ದಾಳೆ. ಇದನ್ನು ನೋಡಿದ 25ವರ್ಷದ ಪೂಜಾ ದತ್ತಾ ರಾವ್ ಕಾಂಬಳೆ ಉಪಾಯವಾಗಿ ಗ್ರಾಮದ ಹೊರ ವಲಯಕ್ಕೆ ಬಾಲಕಿಯನ್ನು ಕರೆದೊಯ್ದು 20 ರೂಪಾಯಿ ಕಿತ್ತುಕೊಂಡು ಬಾವಿಗೆ ತಳ್ಳಿ ಆಕೆಯನ್ನು ಹತ್ಯೆ ಮಾಡಿದ್ದಾಳೆ.