ತೈಲ ವಹಿವಾಟು ಕುಸಿತ, ಹಾಗೂ ಕರೋನಾ ಕಾರಣದಿಂದ ಅವರು ತಮ್ಮ ಕುಟುಂಬಕ್ಕೆ ಎರಡು ಹೊತ್ತು ಊಟ ಕಾಣಿಸಲೂ ಕಷ್ಟಪಡುತ್ತಿದ್ದರು. ಆದರೆ, ಇಂಥ ಕಷ್ಟ ಕಾಲದಲ್ಲೂ, ಅದೃಷ್ಟ ಲಕ್ಷ್ಮೀ ಅವರ ಕೈ ಹಿಡಿದಿದ್ದಾಳೆ. ಇದ್ದಕ್ಕಿದ್ದಂತೆ ಕೋಟ್ಯಾಧೀಶನಾಗಿಬಿಟ್ಟಿದ್ದಾರೆ.
ಇದು ಯಾವುದೋ “ತಿರುಕನ ಕನಸಲ್ಲ” ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಸ್ ಅಲ್ ಖೈಮಾದಲ್ಲಿ ಕಳೆದ 15 ವರ್ಷಗಳಿಂದ ಇರುವ ಕೇರಳ ಮೂಲದ ವ್ಯಕ್ತಿಯ ಜೀವನದ ನಿಜವಾದ ಕಥೆ.
ಉತ್ತರ ಕೇರಳದ ಕಣ್ಣೂರು ಮೂಲದ ಜಿಜೇಶ ಕೊರ್ತ್ ಎಂಬುವವರು ತಮ್ಮ ಸ್ನೇಹಿತರಾದ ಶಾನೊಜ್ ಹಾಗೂ ಶಹಜಹಾನ್ ಜತೆಗೂಡಿ ಅಬುದಾಭಿ ಡ್ಯೂಟಿ-ಫ್ರೀ ಬಿಗ್ ಟಿಕೆಟ್ ಎಂಬ ಲಾಟರಿ ಖರೀದಿಸಿದ್ದರು. ಅವರಿಗೆ 41.50 ಕೋಟಿ ರೂ.(20 ಮಿಲಿಯನ್ ದಿರ್ಹಾಂ)ಗಳ ಮೊದಲ ಬಹುಮಾನ ಒಲಿದಿದೆ. ಜಿಜೇಶ್ ಮೊದಲೇ ಆದ ಒಪ್ಪಂದದಂತೆ ಅವರ ಸ್ನೇಹಿತರಿಬ್ಬರೂ ಕಳೆದುಕೊಂಡ ಉದ್ಯಮವನ್ನು ಮತ್ತೆ ಪಡೆಯಲು ಬಹುಮಾನದ ಹಣವನ್ನು ಇಬ್ಬರಿಗೂ ಹಂಚಿದ್ದಾರೆ.
“ನಾನು ಪತ್ನಿ ಮಗನೊಂದಿಗೆ ಇದ್ದಾಗ ಯಾರೋ ಕರೆ ಮಾಡಿ, ನೀವು ಪಡೆದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿದೆ ಎಂದು ತಿಳಿಸಿದರು. ಯಾರೋ ನನಗೆ ಫ್ರ್ಯಾಂಕ್ ಮಾಡುತ್ತಿದ್ದಾರೆ ಎಂದುಕೊಂಡೆ. ಏಕೆಂದರೆ, ನಾನು ಟಿಕೆಟ್ ಪಡೆದಿದ್ದನ್ನೆ ಮರೆತುಬಿಟ್ಟಿದ್ದೆ. ಕಳೆದ ಮೂರು ತಿಂಗಳಿಂದ ಇಲ್ಲಿ ಬಹಳ ಕಷ್ಟದ ಪರಿಸ್ಥಿತಿ ಇತ್ತು. ಮನೆಯ ಬಾಡಿಗೆ ಕಟ್ಟಿ ದಿನಸಿ ಖರೀದಿಸುವುದೂ ಕಷ್ಟವಾಗಿತ್ತು. ಹೆಂಡತಿ – ಮಗನನ್ನು ಊರಿಗೆ ಕಳಿಸುವ ಯೋಚನೆ ಮಾಡುತ್ತಿದ್ದೆ. ಆದರೆ ಲಾಟರಿ ನನ್ನ ಬದುಕನ್ನೇ ಬದಲಾಯಿಸಿಬಿಟ್ಟಿತು” ಎಂದು ಜಿಜೇಶ್ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.