ಸಂಬಂಧಗಳಲ್ಲಿ ಏಳು ಬೀಳು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮದುವೆಗಳು ವಿಚ್ಛೇದನದಲ್ಲಿ ಅಂತ್ಯವಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ತಿರಸ್ಕಾರ ಎನ್ನುತ್ತಾರೆ ಸಂಶೋಧಕರು. ಸಂಗಾತಿ ನಿಷ್ಪ್ರಯೋಜಕ ಎನಿಸುವುದು ಅಥವಾ ತಿರಸ್ಕಾರದ ಭಾವನೆಯೇ ಬಹುತೇಕ ವಿಚ್ಛೇದನಗಳಿಗೆ ಕಾರಣ ಅನ್ನೋದು ಸಂಶೋಧಕರ ಅಭಿಪ್ರಾಯ.
ಇದು ಕೂಡ ಒಂದು ರೀತಿಯ ದೌರ್ಜನ್ಯವಂತೆ. ಮಾತು ಮಾತಿಗೂ ವಿಮರ್ಶೆ ಮಾಡುವುದು, ಚುಚ್ಚು ಮಾತು, ವ್ಯಂಗ್ಯ, ಬಾಡಿ ಲಾಂಗ್ವೇಜ್, ಗುರಾಯಿಸುವುದು ಇವೆಲ್ಲವೂ ದೌರ್ಜನ್ಯದ ವಿವಿಧ ಬಗೆಗಳು. ಇವುಗಳ ಭರದಲ್ಲಿ ಸಂಗಾತಿಯ ಉತ್ತಮ ನಡತೆ, ಗುಣಗಳನ್ನು ಮರೆತೇ ಬಿಡುತ್ತಾರೆ. ಅದರಲ್ಲೂ ಮನಸ್ಸಿಗೆ ನೋವಾದಾಗ, ಖಿನ್ನತೆ ಮೂಡಿದಾಗ ಕೇವಲ ನೆಗೆಟಿವ್ ಆಲೋಚನೆಗಳೇ ಮೂಡುತ್ತವೆ.
ಅದರ ಬದಲು ಸಂಗಾತಿಯ ಒಂದೇ ಒಂದು ಒಳ್ಳೆಯ ಗುಣ ನೆನೆಸಿಕೊಂಡ್ರೆ ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಪರಸ್ಪರರನ್ನು ತಿರಸ್ಕಾರದ ಭಾವನೆಯಿಂದ ನೋಡಬೇಡಿ. ಪ್ರೀತಿ, ವಿಶ್ವಾಸ, ನಂಬಿಕೆಯ ಜೊತೆಗೆ ಸಂಗಾತಿಯ ಬಗ್ಗೆ ಗೌರವವೂ ಇದ್ದರೆ ಬಾಂಧವ್ಯ ಉತ್ತಮವಾಗಿರುತ್ತದೆ. ನವಿರಾದ ಹಾಸ್ಯ ನಿಮ್ಮ ನಡುವಿನ ಆತ್ಮೀಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.