ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಲು ಸಜ್ಜಾಗಿದ್ದಾರೆ.
ಭೂಗತ ಪಾತಕಿ ದಾವುದ್ ಇಬ್ರಾಹಿಂ ಜೊತೆ ಕೈಜೋಡಿಸಿರುವ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರು ಮುಂಬೈ ಮೇಲಿನ ದಾಳಿ ಮಾದರಿಯಲ್ಲಿ ಕಾಶ್ಮೀರ ಕಣಿವೆ ಮತ್ತು ಭಾರತದ ವಿವಿಧ ಕಡೆಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆಯಾಗಿರುವ ಐಎಸ್ಐ ಪ್ರಮುಖ ಅಧಿಕಾರಿಗಳ ತಂಡದೊಂದಿಗೆ ದಾವೂದ್ ತೆರಳಿ ಲಷ್ಕರ್ ಸಂಘಟನೆಯ ಮುಖಂಡರೊಂದಿಗೆ ಭಾರತದಲ್ಲಿ ದಾಳಿ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಮುಂಬೈ ಮೇಲಿನ 26/11 ಮಾದರಿಯಲ್ಲಿ ದಾಳಿ ನಡೆಸಲು ಐಎಸ್ಐ ಅಧಿಕಾರಿಗಳು ಸಂಚು ರೂಪಿಸಿದ್ದು ಲಷ್ಕರೆ-ಇ-ತೋಯ್ಬಾ ಸಂಘಟನೆಯ ಉಗ್ರರ ಮೂಲಕ ದಾಳಿ ನಡೆಸಲು ಡಿ ಕಂಪನಿ ಸಹಾಯ ಕೇಳಿದ್ದಾರೆ. ಅದಕ್ಕೆ ದಾವೂದ್ ಒಪ್ಪಿಕೊಂಡಿದ್ದಾನೆ.
ಲಷ್ಕರ್ ಸಂಘಟನೆಯ ಕಮಾಂಡ್ ಅಬ್ದುಲ್ ರೆಹಮಾನ್ ಮಕ್ಕಿ ಮತ್ತು ದಾವೂದ್ ಭಾರತದಲ್ಲಿ ದಾಳಿ ನಡೆಸುವ ರೂಪುರೇಷೆ ಸಿದ್ಧಪಡಿಸಲು ಕರಾಚಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ದಾಲಿಯ ಬಗ್ಗೆ ಮಾತುಕತೆ ನಡೆಸಿದ ಇಬ್ಬರು ಸೇರಿ ಇಸ್ಲಾಮಾಬಾದ್ ಗೆ ಬಂದಿದ್ದು ಅಲ್ಲಿ ಐಎಸ್ಐ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಬೇರೆ ಭಯೋತ್ಪಾದಕ ಸಂಘಟನೆಗಳ ಸಹಕಾರ ಪಡೆಯಲು ಸಮುದ್ರ ಮಾರ್ಗವಾಗಿ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆಗೆ ಗೊತ್ತಾಗಿದೆ.