ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳನ್ನು ಭಾರತಕ್ಕೆ ಕರೆತಂದು ಕಾನೂನು ಕಟಕಟೆಯಲ್ಲಿ ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಪ್ರಯತ್ನಕ್ಕೆ ಈಗ ದೊಡ್ಡ ಗೆಲುವು ಸಿಕ್ಕಿದೆ. ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಬರುವ ಕಾಲ ಸನ್ನಿಹಿತವಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಮಲ್ಯ ಈಗ ಹೊಸ ವರಸೆ ಆರಂಭಿಸಿದ್ದಾರೆ.
ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕುಗಳಿಗೆ 9,000 ಕೋಟಿ ರೂಪಾಯಿ ವಂಚಿಸಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಪ್ಪಿಸುವಂತೆ ಕೋರಿ ಭಾರತೀಯ ತನಿಖಾ ಸಂಸ್ಥೆಗಳು ಬ್ರಿಟನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದವು. ಈ ಮನವಿಯನ್ನು ಲಂಡನ್ ಹೈಕೋರ್ಟ್ ಪುರಸ್ಕರಿಸಿದ್ದು, ಹೀಗಾಗಿ ವಿಜಯ್ ಮಲ್ಯ ಇನ್ನು 28 ದಿನದೊಳಗಾಗಿ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ.
ಲಂಡನ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಿಜಯ್ ಮಲ್ಯ ಅಲ್ಲಿನ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದರಾದರೂ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ ವಿಜಯ್ ಮಲ್ಯ ಮುಂದೆ ಯಾವುದೇ ಮಾರ್ಗ ಇಲ್ಲದಂತಾಗಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆ ತಪ್ಪಿಸಿಕೊಳ್ಳಲು ಈಗ ಹೊಸ ವರಸೆ ಆರಂಭಿಸಿದ್ದಾರೆ. ಸಾಲ ಮರುಪಾವತಿ ಮಾಡಲು ನಾನು ಸಿದ್ಧನಿದ್ದು, ಹಣವನ್ನು ಸ್ವೀಕರಿಸಿ ಪ್ರಕರಣ ಕೈಬಿಡಬೇಕೆಂದು ಮನವಿ ಮಾಡುತ್ತಿದ್ದಾರೆ.