ವಿಶ್ವದ ಶ್ರೀಮಂತ ದೇವಾಲಯ ಆಗಿರುವ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯ ಲಾಕ್ಡೌನ್ ಜಾರಿಯಾಗಿದ್ದರಿಂದ ಬಂದ್ ಆಗಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ.
ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು ಜೂನ್ ವರೆಗೂ ದೇವಾಲಯ ತೆರೆಯದಿದ್ದರೆ ತಿರುಪತಿ ತಿಮ್ಮಪ್ಪನ 500 ಕೋಟಿ ರೂಪಾಯಿ ಆಸ್ತಿ ಮಾರಾಟ ಮಾಡುವ ಕುರಿತು ದೇವಾಲಯದ ಆಡಳಿತ ಮಂಡಳಿ ಟಿಟಿಡಿ ಚಿಂತನೆ ನಡೆಸಿದೆ. ಈ ವರ್ಷ ಹುಂಡಿ ಹಣ ಮತ್ತು ದರ್ಶನದಿಂದ 2250 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿತ್ತು.
ದೇವಾಲಯದಲ್ಲಿ ವೇತನ ಪಾವತಿಗೆ 115 ಕೋಟಿ ರೂಪಾಯಿ ಪ್ರತಿ ತಿಂಗಳು ಬೇಕಾಗುತ್ತದೆ. ಆದರೆ ಲಾಕ್ ಡೌನ್ ನಿಂದಾಗಿ ದೇಗುಲಕ್ಕೆ ಸುಮಾರು 200 ಕೋಟಿ ರೂಪಾಯಿ ಮಾಸಿಕ ಆದಾಯ ನಿಂತಿದೆ. ಕಳೆದ ಎರಡು ತಿಂಗಳಿನಿಂದ ಆದಾಯ ಇಲ್ಲದೆ ಸಂಕಷ್ಟದ ಸ್ಥಿತಿ ಎದುರಾಗಿದ್ದು ಜೂನ್ ವೇಳೆಗೆ ದೇವಾಲಯದ ಬಾಗಿಲು ತೆರೆಯಲು ಸಾಧ್ಯವಾಗದಿದ್ದರೆ ಹಣಕಾಸು ಅಗತ್ಯತೆಗಾಗಿ ಭಕ್ತರು ದೇಣಿಗೆ ರೂಪದಲ್ಲಿ ನೀಡಿರುವ ಕೆಲವು ಆಸ್ತಿಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.
ಮುಂಬೈ, ಚೆನ್ನೈ ಸೇರಿದಂತೆ ಕೆಲವು ಮಹಾನಗರಗಳಲ್ಲಿ ತಿರುಪತಿ ತಿರುಮಲ ದೇಗುಲದ ಸ್ಥಿರಾಸ್ತಿಗಳು ನಿರುಪಯುಕ್ತವಾಗಿವೆ. ಅವುಗಳಲ್ಲಿ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟ ಮಾಡಿ ಹಣ ಸಂಗ್ರಹಿಸುವ ಚಿಂತನೆ ನಡೆದಿದೆ. ದೇವಾಲಯದ 7500 ಸಿಬ್ಬಂದಿಗಳಿಗೆ ಅರ್ಧ ವೇತನ ನೀಡಲಾಗುತ್ತಿದೆ. ಸಂಕಷ್ಟದ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.
ದೇವಾಲಯವನ್ನು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಟಿಟಿಡಿ ಆಂಧ್ರಪ್ರದೇಶ ಸರ್ಕಾರಕ್ಕೆ ಅನುಮತಿಯನ್ನು ಕೇಳಿದೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಸುರಕ್ಷತೆ ಮಾನದಂಡಗಳೊಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.