ತಂದೆ ಮತ್ತು ಅಜ್ಜಿ ಸೇರಿಕೊಂಡು ನಾಲ್ಕು ದಿನದ ಹಸುಗೂಸನ್ನು ಕಳ್ಳಿ ಹಾಲು ಕುಡಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಲವಂದನ್ ಪಂಚಾಯಿತಿ ಎಂಬಲ್ಲಿ ಘಟನೆ ನಡೆದಿದೆ. ಮಗುವಿನ ತಂದೆ ತವಾಮಣಿ(33) ಮತ್ತು ಆತನ ತಾಯಿ ಪಾಂಡಿಯಮ್ಮಾಳ್(57) ಅವರನ್ನು ಬಂಧಿಸಲಾಗಿದೆ.
ಕುಟುಂಬದಲ್ಲಿ ನಾಲ್ಕನೇ ಸಲವೂ ಹೆಣ್ಣು ಮಗು ಆಗಿದ್ದರಿಂದ ಅಸಮಾಧಾನಗೊಂಡಿದ್ದ ತವಾಮಣಿ ಮತ್ತು ಪಾಂಡಿಯಮ್ಮಾಳ್ ಮನೆಯಲ್ಲಿ ಮಗುವಿನ ತಾಯಿ ಚಿತ್ರಾ ಇಲ್ಲದ ವೇಳೆಯಲ್ಲಿ ಕಳ್ಳಿ ಹಾಲು, ಗಿಡಮೂಲಿಕೆ ರಸ ಕುಡಿಸಿ ನಾಲ್ಕು ದಿನದ ಹೆಣ್ಣುಮಗುವನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.
ಗಿಡಮೂಲಿಕೆ ರಸ ಕುಡಿದರೂ ಮಗು ಸಾಯದಿದ್ದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ತೆಗೆದುಕೊಂಡು ಹೋಗಿ ನದಿ ಸಮೀಪ ಸಮಾಧಿ ಮಾಡಿದ್ದಾರೆ. ಹುಷಾರಿಲ್ಲದೆ ಮಗು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ್ದಾರೆ. ಇದ್ದಕ್ಕಿದ್ದಂತೆ ಮಗು ಮೃತಪಟ್ಟ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತನಿಖೆ ಕೈಗೊಂಡು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ಹುಷಾರಿಲ್ಲದ ಕಾರಣ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಬಳಿಕ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.