alex Certify ಕೊರೋನಾ ಒತ್ತಡದ ನಡುವೆಯೂ ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಕರೆ ಮಾಡಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಒತ್ತಡದ ನಡುವೆಯೂ ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಕರೆ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಕೊರೋನಾಸೋಂಕು ತಡೆಯುವ ನಿಟ್ಟಿನಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದೊತ್ತಡದ ನಡುವೆಯೂ ಅವರು ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ.

ರಾಜ್ಯ ಬಿಜೆಪಿಯ ಹಿರಿಯ ನಾಯಕರಾಗಿರುವ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕ ರಾಮಭಟ್ ಅವರಿಗೆ ಮೋದಿ ಕರೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಡಿ.ಹೆಚ್. ಶಂಕರಮೂರ್ತಿ ಅವರ ಮೊಬೈಲ್ ಗೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿದ ಅಧಿಕಾರಿ ಪ್ರಧಾನಿಯವರು ನಿಮ್ಮೊಂದಿಗೆ ಮಾತನಾಡಲು ಇಚ್ಛಿಸಿದ್ದಾರೆ. ತಮ್ಮ ಫೋನ್ ಬ್ಯುಸಿ ಇಟ್ಟುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ಕೆಲವೇ ನಿಮಿಷದಲ್ಲಿ ಕರೆ ಮಾಡಿದ ಪ್ರಧಾನಿ, ಶಂಕರಮೂರ್ತಿಯವರ ಆರೋಗ್ಯ ವಿಚಾರಿಸಿ ಕೊರೋನಾ ಲಾಕ್ಡೌನ್ ಸಮಯದಲ್ಲಿ ನಿಮ್ಮ ಆರೋಗ್ಯ ಹೇಗೆ ನೋಡಿಕೊಳ್ಳುತ್ತಿದ್ದೀರಿ ಮತ್ತು ಸಮಯವನ್ನು ಹೇಗೆ ಕಳೆಯುತ್ತಿದ್ದೀರಿ ಎಂದು ಪ್ರಶ್ನಿಸಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಅದೇ ರೀತಿ ರಾಮ ಭಟ್ ಅವರಿಗೂ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪ್ರಧಾನಿಯವರಿಂದ ಕರೆ ನಿರೀಕ್ಷಿಸಿರಲಿಲ್ಲ. ಅವರೇ ನನಗೆ ಫೋನ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದು ಖುಷಿಯಾಗಿದೆ ಎಂದು ಶಂಕರಮೂರ್ತಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಿರಿಯರಾದ ರಾಮಭಟ್ ಮತ್ತು ಶಂಕರಮೂರ್ತಿ ಅವರಿಗೆ ಕರೆ ಮಾಡಿ ಮಾರ್ಗದರ್ಶನ ಕೋರಿದರು. ಕಾರ್ಯಬಾಹುಳ್ಯದ ಒತ್ತಡದ ನಡುವೆಯೂ ಪ್ರಧಾನಿ ದೇಶ ಮತ್ತು ಪಕ್ಷಕ್ಕಾಗಿ ಸರ್ವಸ್ವವನ್ನು ಮುಡಿಪಾಗಿಟ್ಟ ಹಿರಿಯರನ್ನು ನೆನಪಿಸಿ ದೇಶ ಕಟ್ಟಲು ಆಶೀರ್ವಾದ ಕೋರಿದ್ದು ನಮಗೆಲ್ಲರಿಗೂ ಆದರ್ಶಪ್ರಾಯವಾದ ನಡೆಯಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...