ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಕೃತ್ಯಗಳಿಗೆ, ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಭಾರತದೊಳಗೆ ಕೊರೋನಾ ವೈರಸ್ ಹರಡಲು ಸಂಚು ರೂಪಿಸಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿಯೊಳಗೆ ಕೊರೋನಾ ಸೋಂಕಿತರನ್ನು ಕಳುಹಿಸಿ ಕೊರೋನಾ ಸೋಂಕು ಹರಡಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರಿ ಪ್ರಯತ್ನವನ್ನೇ ನಡೆಸಿದೆ. ಪಾಕಿಸ್ತಾನ ಸೈನಿಕರು ಗಡಿ ನಿಯಂತ್ರಣ ರೇಖೆಯ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೈನಿಕರು ಭಾರತದ ಯೋಧರ ಗಮನವನ್ನು ಬೇರೆಡೆಗೆ ಸೆಳೆದು ಗಡಿಯೊಳಗೆ ಕೊರೋನಾ ಸೋಂಕಿತರನ್ನು ಕಳುಹಿಸಲು ಸಂಚು ರೂಪಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ ಬಾಗ್ ಸಿಂಗ್ ಅವರು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಗಡಿಪ್ರದೇಶದ ಗ್ರಾಮಸ್ಥರಿಗೂ ಕೂಡ ಮಾಹಿತಿ ನೀಡಲಾಗಿದೆ. ಯಾವುದೇ ಹೊಸ ವ್ಯಕ್ತಿ ಕಂಡು ಬಂದರೆ ಪೊಲೀಸರಿಗೆ ಸೂಚನೆ ನೀಡುವಂತೆ ತಿಳಿಸಲಾಗಿದೆ. ಗಡಿಯಲ್ಲಿ ನಿಯೋಜಿತ ಯೋಧರಿಗೂ ಈ ಕುರಿತು ತಿಳಿಸಲಾಗಿದೆ.
ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಈಗ ಭಾರತದ ವಿರುದ್ಧ ಕೋರೋನಾ ವೈರಸ್ ಅನ್ನು ಅಸ್ತ್ರವಾಗಿ ಪ್ರಯೋಗಿಸಲು ಪಾಕಿಸ್ತಾನ ಸಂಚು ರೂಪಿಸಿದೆ. ಈ ಹಿನ್ನಲೆಯಲ್ಲಿ ಗಡಿಯಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಲಾಗಿದೆ.