ತಿರುವನಂತಪುರಂ: ಸಾಮಾಜಿಕ ಅಂತರ ಕಾಪಾಡಲು ಕೇರಳ ಅಲಪ್ಪುಜ ಜಿಲ್ಲೆಯ ತನ್ನೀರಮುಕ್ಕೋಂ ಗ್ರಾಮದ ಜನರು ಕೊಡೆ ಬಳಕೆ ಪ್ರಾರಂಭಿಸಿದ್ದಾರೆ.
ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಪರಸ್ಪರ 1 ಮೀಟರ್ ಅಂತರ ಕಾಪಾಡುವ ಈ ಉಪಾಯವನ್ನು ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಗೆ ಹೇಳಿ ಕೊಟ್ಟಿದ್ದಾರೆ.
ಈ ಸಂಬಂಧ ಐಸಾಕ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಬರೆದುಕೊಂಡಿದ್ದಾರೆ.
“ಐಸಾಕ್ ಅವರು ನಮ್ಮ ಹಾಲಿ ಶಾಸಕರಲ್ಲ. ಮೊದಲು ನಮ್ಮ ಗ್ರಾಮ ಅವರ ಕ್ಷೇತ್ರಕ್ಕೆ ಸೇರುತ್ತಿತ್ತು. ಆದರೂ ಅವರು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಗ್ರಾಮದ ಜನ ಹೊರ ಬರಬೇಕಾದರೆ ಕೊಡೆ ಹಿಡಿದು ಬರಬೇಕು ಮುಂದೆ ಸಭೆಯಲ್ಲಿ ಈ ಸಂಬಂಧ ನಿರ್ಣಯ ಮಾಡಲಿದ್ದೇವೆ. 20 ರಿಂದ 50 ರೂ. ರಿಯಾಯಿತಿ ಬೆಲೆಗೆ ಕೊಡೆ ನೀಡುತ್ತಿದ್ದೇವೆ” ಎಂದು ಗ್ರಾಪಂ ಅಧ್ಯಕ್ಷ ಪಿ.ಎಸ್.ಜ್ಯೋತಿಸ್ ತಿಳಿಸಿದ್ದಾರೆ.