ಕೋವಿಡ್ ಸಾಂಕ್ರಮಿಕದ ಲಾಕ್ಡೌನ್ ಕಾರಣದಿಂದ ಅನೇಕ ಆರ್ಥಿಕ ಚಟುವಟಿಕೆಗಳು ಹಳ್ಳ ಹಿಡಿದಿರುವ ಕಾರಣ ಕೆಳ ಮಧ್ಯಮ ಹಾಗೂ ಬಡವರ ಪಾಡು ಹೇಳದಂತಾಗಿದೆ. ಇದೇ ವೇಳೆ ಕಠಿಣ ದಿನಗಳನ್ನು ನೋಡುತ್ತಿರುವ ಮಂದಿಯ ನೆರವಿಗೆ ನಿಲ್ಲಲು ಬಹಳಷ್ಟು ಸಹೃದಯಿಗಳು ಮುಂದೆ ಬಂದಿದ್ದಾರೆ.
ಒಡಿಶಾದ ಮಾನ್ಶಿ ಸತ್ಪಾಠಿ ಸಹ ಒಬ್ಬರಾಗಿದ್ದಾರೆ. ಭುವನೇಶ್ವರದ ರಸೂಲ್ಘರ ಪ್ರದೇಶದ ನಾಲಾ ಬಸ್ತಿಯಲ್ಲಿರುವ ಬುಡಕಟ್ಟು ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಹೊಣೆಯನ್ನು ಮಾನ್ಶಿ ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ.
“ಸ್ಲಂ ಪ್ರದೇಶದಲ್ಲಿರುವ ಅನೇಕ ಪೋಷಕರು ದಿನಗೂಲಿ ಕೆಲಸಗಾರರು.ಈ ಮಂದಿಗೆ ಸರ್ಕಾರ ಅನೇಕ ಯೋಜನೆಗಳನ್ನು ತಂದರೂ ಸಹ ಅವರಿಗೆ ಈ ಜಾಗ ಬಿಡಲು ಇಷ್ಟವಿಲ್ಲ. ಅವರ ಮಕ್ಕಳಿಗೆ ಇಲ್ಲಿಯೇ ಪಾಠ ಹೇಳಿಕೊಟ್ಟರೆ ಅವರಿಗೆ ಅಧ್ಯಯನದ ಮೇಲೆ ಗಮನ ಮೂಡಬಹುದು ಎಂದು ನನಗೆ ಅನಿಸುತ್ತದೆ” ಎನ್ನುತ್ತಾರೆ ಮಾನ್ಶಿ.
ಸದ್ಯ 40 ಮಕ್ಕಳಿಗೆ ಮಾನ್ಶಿ ಪಾಠ ಹೇಳಿಕೊಡುತ್ತಿದ್ದಾರೆ. ಈ ಹೊಣೆ ವಹಿಸಿಕೊಂಡ ಒಂದೇ ವರ್ಷದ ಒಳಗೆ ಮಕ್ಕಳಿಗೆ ಒಡಿಯಾ, ಇಂಗ್ಲಿಷ್ನಲ್ಲಿ ಓದಲು ಸಾಧ್ಯವಾಗುತ್ತಿದ್ದು, ಅವರೀಗ ಸಾಮಾನ್ಯ ಜ್ಞಾನ ಹಾಗೂ ಗಣಿತದ ವಿಷಯಗಳನ್ನೂ ನಿಧಾನವಾಗಿ ಮನನ ಮಾಡಿಕೊಳ್ಳುತ್ತಿದ್ದಾರೆ.