ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೊಬ್ಬನಿಗೆ ಆತನ ಶಿಕ್ಷಕರೊಬ್ಬರು ಸಮಾಧಾನ ಹೇಳಿ, ಮುಂದಿನ ಪ್ರಯತ್ನದಲ್ಲಿ ಇನ್ನಷ್ಟು ಪರಿಶ್ರಮ ಹಾಕಲು ಉತ್ತೇಜನ ನೀಡುತ್ತಿರುವ ಪೋಸ್ಟ್ ಒಂದು ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಶೇಷ ಆರೈಕೆ ಏಕೆ ಬೇಕೆಂದು ಶಿಕ್ಷಕರಾದ ಪ್ರಭಾಕರ ಪ್ರಿಯಮ್ ವಿವರಿಸಿದ್ದಾರೆ. ಕೇರಳದ ಕೋಯಿಕ್ಕೋಡ್ನ ಮದಪ್ಪಳ್ಳಿ ಪ್ರೌಢ ಶಾಲಾ ಶಿಕ್ಷಕರಾದ ಪ್ರಭಾಕರನ್ ತಮ್ಮ ಶಾಲೆಯಲ್ಲಿ ಓದಿ ಈ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಪಾಸಾದ 434 ವಿದ್ಯಾರ್ಥಿಗಳ ನಡುವೆ ಫೇಲ್ ಆದ ವಿದ್ಯಾರ್ಥಿಯೊಬ್ಬನಿಗೆ ಖುದ್ದು ಕರೆ ಮಾಡಿ, ಎದೆಗುಂದಿದ್ದ ಆತನಿಗೆ ಧೈರ್ಯ ತುಂಬಿದ್ದಾರೆ.
ಆ ಹುಡುಗ ನಪಾಸಾದ ಹಿಂದೆ ಶಿಕ್ಷಕರ ಪಾತ್ರವೂ ಇದ್ದು, ಆತನಿಗೆ ಸಿಗಬೇಕಾದ ಪ್ರೋತ್ಸಾಹ ತಮ್ಮಿಂದ ಸಿಗದೇ ಇರಬಹುದು ಎಂದು ಹೇಳಿರುವ ಪ್ರಭಾಕರನ್, ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ತಂತಮ್ಮ ಜೀವನಗಳಲ್ಲಿ ಯಶಸ್ಸು ಕಂಡಿರುವ ಸಾಕಷ್ಟು ಮಂದಿಯ ನಿದರ್ಶನವನ್ನು ಕೊಟ್ಟಿದ್ದಾರೆ. ಹುಡುಗನೊಂದಿಗೆ ದೂರವಾಣಿಯಲ್ಲಿ ಸಂವಹನ ನಡೆಸಿದ ಶಿಕ್ಷಕರು ಆತನಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ನೆಟ್ಟಿಗರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ.