ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೆ ತಂದಿರುವ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕಾಲ್ನಡಿಗೆಯಲ್ಲೇ ತಮ್ಮ ತಮ್ಮ ಊರುಗಳಿಗೆ ಸಾಗುತ್ತಿರುವ ಈ ಕೂಲಿ ಕಾರ್ಮಿಕರ ಪೈಕಿ ಹಲವರು ಮಾರ್ಗಮಧ್ಯದಲ್ಲೇ ದುರಂತ ಸಾವನ್ನಪ್ಪುತ್ತಿದ್ದಾರೆ.
ಈ ಸಾವಿನ ಸರಣಿಗೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು, ಗುಜರಾತಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಅಮೃತ್ ಎಂಬ ಯುವಕ ಈಗ ಬಲಿಯಾಗಿದ್ದಾನೆ. ಸಹ ಕಾರ್ಮಿಕರ ಜೊತೆ ಈತ ಟ್ರಕ್ ನಲ್ಲಿ ತೆರಳುತ್ತಿರುವಾಗ ಮಾರ್ಗಮಧ್ಯದಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಟ್ರಕ್ ಚಾಲಕ ಆತನನ್ನು ಮಾರ್ಗಮಧ್ಯದಲ್ಲೇ ಇಳಿಸಿದ್ದಾನೆ.
ಅಮೃತ್ ಜೊತೆಗೆ ಆತನ ಸ್ನೇಹಿತ ಯಾಕೂಬ್ ಸಹ ಟ್ರಕ್ ನಿಂದ ಕೆಳಗಿಳಿದಿದ್ದು, ಸ್ನೇಹಿತನನ್ನು ಮಡಿಲಲ್ಲಿ ಮಲಗಿಸಿಕೊಂಡು ದಾರಿಯಲ್ಲಿ ಸಾಗುತ್ತಿರುವವರ ಸಹಾಯ ಯಾಚಿಸಿದ್ದಾನೆ. ಆದರೆ ಕೊರೊನಾ ಭಯದಿಂದ ಯಾರೊಬ್ಬರೂ ಅವರ ಹತ್ತಿರ ಹೋಗಿಲ್ಲ. ಬದಲಾಗಿ ತಮ್ಮ ಮೊಬೈಲ್ನಲ್ಲಿ ಇವರುಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ಹೊತ್ತಿ ನಲ್ಲೆ ಅಮೃತ್ ಪ್ರಾಣಪಕ್ಷಿ ಹಾರಿಹೋಗಿದ್ದು, ಅಮೃತ್ ಹಾಗೂ ಯಾಕೂಬ್ ಅವರ ಈ ನೋವಿನ ಕ್ಷಣಗಳ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.