ತೆಲುಗಿನ ಖ್ಯಾತ ನಿರೂಪಕಿ ಶ್ರೀಮುಖಿ ನಿರೂಪಣೆ ಹೊರತುಪಡಿಸಿ ಬೇರೊಂದು ವಿಚಾರವಾಗಿ ಇದೀಗ ಸುದ್ದಿಯಾಗಿದ್ದಾರೆ. ಎರಡು ವರ್ಷದ ಹಿಂದೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಈ ನಿರೂಪಕಿ ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿದ್ದರು ಹಾಗೂ ಅವಮಾನ ಮಾಡಿದ್ದರು ಎಂಬ ಕಾರಣಕ್ಕೆ ಇವರ ವಿರುದ್ಧ ದೂರು ದಾಖಲಾಗಿದೆ.
ಹೌದು, ತೆಲುಗಿನಲ್ಲಿ ನಿರೂಪಣೆ ಮೂಲಕ ಮನೆ ಮಾತಾದ ಶ್ರೀಮುಖಿ ಮೇಲೆ ಗುರುತರವಾದ ಆರೋಪ ಕೇಳಿ ಬಂದಿದೆ. ಎರಡು ವರ್ಷಗಳ ಹಿಂದಿನ ಜೂಲಕಟಕ ಶೋನಲ್ಲಿನ ಕಾಮಿಡಿ ಸ್ಕಿಟ್ನಲ್ಲಿ ಬ್ರಾಹ್ಮಣರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆಂಧ್ರದ ವಿದ್ಯಾನಗರ ನಿವಾಸಿ ವೆಂಕಟರಾಮ ಶರ್ಮಾ ಬಂಜಾರಾ ಹಿಲ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀಮುಖಿ ಇದು ಎರಡು ವರ್ಷದ ಹಿಂದೆ ನಡೆದ ಕಾರ್ಯಕ್ರಮ. ಆದರೆ ಈಗ ಯಾಕೆ ಕಂಪ್ಲೇಂಟ್ ಕೊಟ್ಟಿದ್ದಾರೊ ಗೊತ್ತಿಲ್ಲ. ನಾನು ಯಾರ ಭಾವನೆಗೂ ಧಕ್ಕೆ ಆಗಬೇಕೆಂದು ಮಾತನಾಡಿಲ್ಲ. ಆದರೆ ಇದರಿಂದ ಅವರ ಭಾವನೆಗೆ ಧಕ್ಕೆಯಾಗಿದ್ದಲ್ಲಿ ನಾನು ಕ್ಷಮೆ ಯಾಚಿಸುವೆ ಹಾಗೂ ಪೊಲಿಸರ ತನಿಖೆಗೆ ಸಹಕಾರ ಕೊಡ್ತೀನಿ ಎಂದು ಹೇಳಿದ್ದಾರೆ.