ದೇಶದಲ್ಲಿ ವಕ್ಕರಿಸಿರುವ ಕರೋನಾ ಮಹಾಮಾರಿ ಈಗಾಗಲೇ ಹಲವರನ್ನು ಬಲಿ ಪಡೆದಿದೆ. ಹದಿನೈದು ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರಣಾಂತಿಕ ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು, ಮೇ 3ರವರೆಗೆ ಇದು ಮುಂದುವರಿಯಲಿದೆ. ಲಾಕ್ಡೌನ್ ನಡುವೆಯೂ ಕೆಲವರು ಇದನ್ನು ಉಲ್ಲಂಘಿಸಿ ಓಡಾಟ ನಡೆಸಿದ್ದು, ಪೊಲೀಸರ ಲಾಠಿ ಏಟಿಗೂ ಬಗ್ಗುತ್ತಿಲ್ಲ. ಹೀಗಾಗಿ ಜನರ ಓಡಾಟ ನಿಯಂತ್ರಿಸಲು ಗ್ರಾಮ ಪಂಚಾಯಿತಿಯೊಂದು ಭರ್ಜರಿ ಉಪಾಯ ಮಾಡಿದೆ.
ಲಾಕ್ಡೌನ್ ಸಂದರ್ಭದಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುಟುಂಬಕ್ಕೆ ಬಂಪರ್ ಬಹುಮಾನ ನೀಡಲು ಕೇರಳದ ಮಲಪ್ಪುರಂ ಜಿಲ್ಲೆಯ ಥಳಿಕ್ಕೋಡ್ ಗ್ರಾಮ ಪಂಚಾಯಿತಿ ತೀರ್ಮಾನಿಸಿದ್ದು, ಮೊದಲ ಬಹುಮಾನವಾಗಿ ಚಿನ್ನದ ನಾಣ್ಯ, ಎರಡನೇ ಬಹುಮಾನವಾಗಿ ರೆಫ್ರಿಜರೇಟರ್, ಮೂರನೇ ಬಹುಮಾನವಾಗಿ ವಾಷಿಂಗ್ ಮೆಷಿನ್ ಹಾಗೂ ಇತರೆ ಸಮಾಧಾನಕರ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿದೆ.