alex Certify ರಾಜ್ಯಸಭಾ ಚುನಾವಣೆ: 13 ಸ್ಥಾನಗಳಿಗೆ ನಾಳೆ ಮತದಾನ – 6 ರಾಜ್ಯಗಳಲ್ಲಿ ಆಡಳಿತ ಪಕ್ಷದ್ದೇ ಮೇಲುಗೈ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭಾ ಚುನಾವಣೆ: 13 ಸ್ಥಾನಗಳಿಗೆ ನಾಳೆ ಮತದಾನ – 6 ರಾಜ್ಯಗಳಲ್ಲಿ ಆಡಳಿತ ಪಕ್ಷದ್ದೇ ಮೇಲುಗೈ…!

ಆರು ರಾಜ್ಯಗಳ 13 ರಾಜ್ಯಸಭಾ ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಪಂಜಾಬ್‌ನಿಂದ ಐದು ಸದಸ್ಯರು, ಕೇರಳದಿಂದ ಮೂವರು, ಅಸ್ಸಾಂನಿಂದ ಇಬ್ಬರು, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಿಂದ ತಲಾ ಒಬ್ಬರು ಸದಸ್ಯರು ಆಯ್ಕೆಯಾಗಲಿದ್ದಾರೆ.

ಪಂಜಾಬ್‌ನ ಐವರು ಸದಸ್ಯರು ಏಪ್ರಿಲ್ 9ರಂದು ನಿವೃತ್ತರಾಗುತ್ತಿದ್ದರೆ, ಉಳಿದ ರಾಜ್ಯಗಳ ಸದಸ್ಯರು ಏಪ್ರಿಲ್ 2ರಂದು ನಿವೃತ್ತರಾಗುತ್ತಿದ್ದಾರೆ. ನಾಳೆ ಸಂಜೆ 5 ಗಂಟೆಯ ನಂತರ ಮತ ಎಣಿಕೆ ನಡೆಯಲಿದೆ. ಪ್ರತಿ ರಾಜ್ಯದಿಂದ ಮೂರನೇ ಒಂದು ಭಾಗದಷ್ಟು ರಾಜ್ಯಸಭಾ ಸದಸ್ಯರು ಆರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.

ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ಮಾತ್ರ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಅವರು ಅಭ್ಯರ್ಥಿಗಳಿಗೆ ತಮ್ಮ ಆದ್ಯತೆಯನ್ನು ಮೊದಲ, ಎರಡನೆಯ ಅಥವಾ ಮೂರನೇ ಆಯ್ಕೆಯ ಕ್ರಮದಲ್ಲಿ ಗುರುತಿಸುತ್ತಾರೆ.

ಅಸ್ಸಾಂನಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿಯಿಂದ ಪಬಿತ್ರಾ ಮಾರ್ಗರಿಟಾ ಕಣದಲ್ಲಿದ್ದರೆ, ಮಿತ್ರಪಕ್ಷ ಯುಪಿಪಿಎಲ್ ನ ರುಂಗ್ವ್ರಾ ನರ್ಜಾರಿ ಅವರನ್ನು ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್, ರಿಪುನ್ ಬೋರಾ ಅವರನ್ನು ಕಣಕ್ಕಿಳಿಸಿದೆ. ಅಸ್ಸಾಂನಲ್ಲಿ ಬಹುಮತ ಕಳೆದುಕೊಂಡ ನಂತರ ಕಾಂಗ್ರೆಸ್ ಕೇವಲ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಅಡ್ಡ ಮತದಾನ ನಡೆಯುವ ನಿರೀಕ್ಷೆಯಿರುವುದರಿಂದ ಬಿಜೆಪಿ ಎರಡೂ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಕೇರಳದಲ್ಲಿ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ತನ್ನ ಮಹಿಳಾ ಘಟಕದ ಅಧ್ಯಕ್ಷೆ ಜೆಬಿ ಮಾಥರ್ ಅವರನ್ನು ನಾಮನಿರ್ದೇಶನ ಮಾಡಿದೆ. ಆಡಳಿತಾರೂಢ ಎಲ್‌ಡಿಎಫ್ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಎ.ಎ. ರಹೀಮ್ ಮತ್ತು ಸಿಪಿಐನ ಪಿ.ಸಂತೋಷ್ ಕುಮಾರ್ ಕೂಡ ಕಣದಲ್ಲಿದ್ದಾರೆ. ಎ.ಕೆ. ಆಂಟನಿ, ಎಂ.ವಿ. ಶ್ರೇಯಾಂಶ್‌ ಕುಮಾರ್ ಮತ್ತು ಸೋಮಪ್ರಸಾದ್.ಕೆ ಅವರ ಅಧಿಕಾರಾವಧಿ ಅಂತ್ಯವಾಗುತ್ತಿದೆ. 140 ಸದಸ್ಯರ ಅಸೆಂಬ್ಲಿಯಲ್ಲಿ ಎಲ್‌ಡಿಎಫ್ 99 ಸ್ಥಾನಗಳನ್ನು ಹೊಂದಿರುವ ಕಾರಣ, ಅದು ಎರಡೂ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ತನ್ನ ಏಕೈಕ ಸ್ಥಾನವನ್ನು ಉಳಿಸಿಕೊಳ್ಳಬಹುದು.

ಪಂಜಾಬ್‌ ನಲ್ಲಿ ಎಎಪಿ ತನ್ನ ಉಸ್ತುವಾರಿ ರಾಘವ್ ಚಡ್ಡಾ, ಐಐಟಿ ದೆಹಲಿ ಪ್ರೊಫೆಸರ್ ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಚಾನ್ಸೆಲರ್ ಅಶೋಕ್ ಮಿತ್ತಲ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಲುಧಿಯಾನ ಮೂಲದ ಉದ್ಯಮಿ ಸಂಜೀವ್ ಅರೋರಾ ಅವರನ್ನು ತನ್ನ ಐದು ರಾಜ್ಯಸಭಾ ನಾಮನಿರ್ದೇಶನಗಳಾಗಿ ಹೆಸರಿಸಿದೆ. ಈ ಐವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯಲ್ಲಿ ಕೇವಲ 25 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನೇ ಸ್ಪರ್ಧೆಗಿಳಿಸಿಲ್ಲ.

ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ಏಕೈಕ ರಾಜ್ಯಸಭಾ ಸ್ಥಾನಕ್ಕೆ  ರಾಜ್ಯಾಧ್ಯಕ್ಷ ಡಾ.ಮಾಣಿಕ್ ಸಹಾ ಅವರನ್ನು ಪಕ್ಷ ನಾಮನಿರ್ದೇಶನ ಮಾಡಿದೆ. ಎಡರಂಗವು ಹಿರಿಯ ಸಿಪಿಐ(ಎಂ) ನಾಯಕ ಭಾನು ಲಾಲ್ ಸಹಾ ಅವರನ್ನು ಹೆಸರಿಸಿದೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲಿ ರಾಜ್ಯಸಭೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಹೆಸರಿಸದೇ ಇದ್ದಿದ್ರಿಂದ ಬಿಜೆಪಿಯ ಪ್ರೊಫೆಸರ್‌ ಸಿಕಂದರ್‌ ಕುಮಾರ್‌ ಅವಿರೋಧವಾಗಿ ಆಯ್ಕೆಯಾಗ್ತಿದ್ದಾರೆ.

ನಾಗಾಲ್ಯಾಂಡ್‌ ನಲ್ಲೂ ಪ್ರತಿಪಕ್ಷವೇ ಇಲ್ಲ. ಎಸ್.‌ ಫಂಗ್ನೊನ್‌ ಕೊಯೊಂಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೇಲ್ಮನೆಗೆ ಆಯ್ಕೆಯಾದ ನಾಗಾಲ್ಯಾಂಡ್‌ ನ ಮೊದಲ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...