ಕೊರೊನಾದಿಂದಾಗಿ ಲಾಕ್ಡೌನ್ ಮುಂದುವರೆದಿದೆ. ನಾಲ್ಕನೇ ಹಂತದ ಲಾಕ್ಡೌನ್ ನಾಳೆಗೆ ಪೂರ್ಣಗೊಳ್ಳಲಿದ್ದು, ಐದನೇ ಹಂತದ ಲಾಕ್ಡೌನ್ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐದನೇ ಹಂತದ ಲಾಕ್ಡೌನ್ನಲ್ಲಿ ಏನೆಲ್ಲಾ ವಿನಾಯಿತಿಗಳು ಸಿಗಲಿವೆ ಎಂಬ ಕುತೂಹಲ ಇದ್ದೇ ಇದೆ.
ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಈಗಾಗಲೇ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿದರೂ ಕೂಡ ರೆಸ್ಟೋರೆಂಟ್, ಥಿಯೇಟರ್ ಹಾಗೂ ಮಾಲ್ಗಳು ಸೇರಿದಂತೆ ಇನ್ನೊಂದಿಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಿಲ್ಲ. ಹಾಗಾಗಿ ಐದನೇ ಹಂತದ ಲಾಕ್ಡೌನ್ನಲ್ಲಿ ವಿನಾಯಿತಿ ಸಿಗುವ ಸೂಚನೆ ಇದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಕಡಿಮೆ ಇರುವ ಕಡೆಗಳಲ್ಲಿ ಹೆಚ್ಚಿನ ವಿನಾಯಿತಿ ನೀಡಲು ಮಂದಾಗಿದ್ದು, ಹೆಚ್ಚಿನ ಕೊರೊನಾ ಸೋಂಕು ಇರುವ ಪ್ರದೇಶಗಳನ್ನು ಪಟ್ಟಿ ಮಾಡಿದೆ ಎನ್ನಲಾಗುತ್ತಿದೆ.
ಒಟ್ಟು 13 ನಗರಗಳನ್ನು ಗುರುತಿಸಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ-ಹೌರಾ, ಇಂದೋರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರುಗಳು ಹೆಚ್ಚಿನ ಕೊರೊನಾ ಸೋಂಕು ಇರುವ ನಗರಗಳಾಗಿವೆ. ಈ ನಗರಗಳನ್ನು ಹೊರತುಪಡಿಸಿ ಉಳಿದ ಕಡೆ ಹೆಚ್ಚಿನ ವಿನಾಯಿತಿ ನೀಡಲು ಮುಂದಾಗಿದೆಯಂತೆ.
ನಾಲ್ಕನೇ ಹಂತದ ಲಾಕ್ಡೌನ್ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಜೂನ್ 1 ರಿಂದ ಷರತ್ತು ಬದ್ಧವಾಗಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡಲು ಅನುಮತಿ ನೀಡುವ ಸಾಧ್ಯತೆಯಿದೆ.