ದೇಶದಲ್ಲಿ ವ್ಯಾಪಿಸಿರುವ ಕರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಾರದ ಮಧ್ಯೆ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ.
ಇದರ ಪರಿಣಾಮವಾಗಿ ಇದುವರೆಗೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಜನರಿಂದ ತುಂಬಿತುಳಕತೊಡಗಿದ್ದು, ಸಾಮಾಜಿಕ ಅಂತರದ ಪರಿವೆಯಿಲ್ಲದೆ ಬಹುತೇಕರು ವರ್ತಿಸುತ್ತಿದ್ದಾರೆ. ಇದರಿಂದಾಗಿ ಕರೋನ ಮಹಾಮಾರಿ ವ್ಯಾಪಕವಾಗಬಹುದೆಂಬ ಭೀತಿ ಎದುರಾಗಿದೆ.
ಇದರ ಮಧ್ಯೆ ಈಗ ಸರ್ಕಾರ ವಿದೇಶದಲ್ಲಿ ಸಿಲುಕಿರುವ ಸುಮಾರು 2ಲಕ್ಷಕ್ಕೂ ಅಧಿಕ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಮುಂದಾಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ವಿದೇಶದಿಂದ ಆಗಮಿಸಿದವರಿಂದಲೇ ದೇಶಕ್ಕೆ ಕರೋನಾ ಕಾಲಿಟ್ಟಿದ್ದು, ಇದೀಗ ಇಷ್ಟು ದೊಡ್ಡ ಪ್ರಮಾಣದಲ್ಲಿ ಕರೆದುಕೊಂಡು ಬರುತ್ತಿರುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ವಿದೇಶದಿಂದ ಕರೆತರುವವರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೂ ಸಹ ಇದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬ ಪ್ರಶ್ನೆ ಈಗ ಮೂಡಿದೆ.