ಬೆಂಗಳೂರು: ಹನಿಟ್ರ್ಯಾಪ್ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಕಲಬುರ್ಗಿ ವೈದ್ಯನನ್ನು ಹನಿಟ್ರ್ಯಾಪ್ ಮಾಡಿದ್ದ ತಂಡವನ್ನು ಬಂಧಿಸಲಾಗಿದೆ.
ಡಾ. ಶಂಕರ್ ಸ್ನೇಹಿತ ನಾಗರಾಜ್ ನಿಂದಲೇ ಹನಿಟ್ರ್ಯಾಪ್ ನಡೆಸಲಾಗಿದೆ. ಕಲಬುರ್ಗಿ ಜಿಲ್ಲೆಯ ಆಳಂದ ಮೂಲದವರಾದ ಡಾ. ಶಂಕರ್ ಪುತ್ರನಿಗೆ ಮೆಡಿಕಲ್ ಸೀಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. 2021ರಲ್ಲಿ ನಾಗರಾಜ್ ಮೂಲಕ ಮೆಡಿಕಲ್ ಸೀಟು ಪಡೆಯಲು ಪ್ರಯತ್ನಿಸಿದ್ದರು. 66 ಲಕ್ಷ ರೂಪಾಯಿ ಪಡೆದು ಸೀಟ್ ಕೊಡಿಸುವುದಾಗಿ ನಾಗರಾಜ್ ಹೇಳಿದ್ದ. ಹಂತಹಂತವಾಗಿ 66 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಆದರೆ, ಸೀಟ್ ಕೊಡಿಸದ ಹಿನ್ನೆಲೆಯಲ್ಲಿ ವೈದ್ಯರು ಹಣ ವಾಪಸ್ ಕೊಡುವಂತೆ ಕೇಳಿದ್ದರು.
ಹಣ ಕೊಡುವುದಾಗಿ ಉಪ್ಪಾರಪೇಟೆ ಲಾಡ್ಜ್ ನಲ್ಲಿ ಶಂಕರ್ ಅವರನ್ನು ನಾಗರಾಜ್ ಇರಿಸಿದ್ದ. ಅವರಿದ್ದ ಕೊಠಡಿಗೆ ಯುವತಿಯರು ಬಂಧಿದ್ದರು. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ಕೂಡ ಬಂದಿದ್ದರು. ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ ಎಂದು ಬೆದರಿಕೆ ಹಾಕಿದ್ದರು. ನಿಮ್ಮ ವಿರುದ್ಧ ಕೇಸ್ ದಾಖಲಿಸದಿರಲು 50 ಲಕ್ಷ ರೂ. ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಡಾ. ಶಂಕರ್ ಅವರಿಂದ 50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಲ್ಲದೇ, ಮತ್ತೆ 50 ಲಕ್ಷ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದರು. ಲಾಡ್ಜ್ ನಲ್ಲಿ ನಿಮ್ಮ ಜೊತೆಗಿದ್ದ ಯುವತಿಯರ ಜಾಮೀನಿಗಾಗಿ ಹಣ ಕೊಡಿ ಎಂದು ನಾಗರಾಜ್ ಮತ್ತು ಗ್ಯಾಂಗ್ ವೈದ್ಯ ಶಂಕರ್ ಅವರಿಗೆ ಒತ್ತಾಯಿಸಿತ್ತು.
ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆಗೆ ಯತ್ನಿಸಿದವರ ವಿರುದ್ಧ ಆಳಂದ ಮೂಲದ ವೈದ್ಯ ಶಂಕರ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಂಕರ್ ಸ್ನೇಹಿತ ನಾಗರಾಜ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.