ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಿಬ್ಬರ ಜೊತೆಗೆ 28 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದ್ದು, ಆಯ್ಕೆಗಾಗಿ ಈಗ ಚರ್ಚೆ ನಡೆದಿದೆ.
ನವದೆಹಲಿಯ ರಾಜಾಜಿ ಮಾರ್ಗ್ ನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಸಚಿವ ಆಕಾಂಕ್ಷಿಗಳು ದೌಡಾಯಿಸಿದ್ದು, ತಮಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇವರ ಮಧ್ಯೆ ತಮಗೆ ಸಚಿವ ಸ್ಥಾನ ಖಚಿತವಾಗಿದ್ದರೂ ಸಹ ಹಲವು ಹಿರಿಯ ಪ್ರಭಾವಿ ಶಾಸಕರುಗಳಿಗೆ ಯಾವ ಖಾತೆ ಸಿಗಲಿದೆಯೋ ಎಂಬ ಆತಂಕ ಶುರುವಾಗಿದೆ.
ಹೀಗಾಗಿ ಉತ್ತಮ ಖಾತೆ ಪಡೆಯುವ ನಿಟ್ಟಿನಲ್ಲಿ ಇವರುಗಳು ಲಾಬಿ ಆರಂಭಿಸಿದ್ದು, ಹಿರಿತನದ ಆಧಾರದ ಮೇಲೆ ತಮ್ಮ ಹಕ್ಕು ಮಂಡಿಸಲು ಮುಂದಾಗಿದ್ದಾರೆ. ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಮೊದಲಾದವರು ಸಚಿವರಾಗುವುದು ಬಹುತೇಕ ಖಚಿತವಾಗಿದೆ.