ಬೆಂಗಳೂರು: ಸಿಇಟಿಯಲ್ಲಿ 45ಕ್ಕೂ ಅಧಿಕ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಿದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಸರ್ಕಾರ ಮರು ಪರೀಕ್ಷೆಗೆ ಚಿಂತನೆ ನಡೆಸಿದೆ. ಮರು ಪರೀಕ್ಷೆಗೆ ವಿದ್ಯಾರ್ಥಿಗಳು, ಪೋಷಕರು, ತಜ್ಞರಿಂದ ವಿರೋಧ ವ್ಯಕ್ತವಾಗಿದೆ. ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.
ಸಿಇಟಿ ಗೊಂದಲ ತನಿಖೆಗೆ ಸರ್ಕಾರದಿಂದ ನೇಮಕ ಮಾಡಿದ್ದ ನಾಲ್ವರು ವಿಷಯ ತಜ್ಞರ ಒಳಗೊಂಡ ಸಮಿತಿಯು ಪಠ್ಯದಿಂದ ಹೊರತಾದ ಪ್ರಶ್ನೆ ಕೇಳಿರುವುದನ್ನು ದೃಢಪಡಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕೃಪಾಂಕ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮರು ಪರೀಕ್ಷೆ ನಡೆಸುವುದು ಸೂಕ್ತ ಪರಿಹಾರವೆಂದು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಆದರೆ, ಮರು ಪರೀಕ್ಷೆಗೆ ವಿದ್ಯಾರ್ಥಿಗಳು, ಪೋಷಕರು, ವಿಷಯ ತಜ್ಞರಿಂದ ವಿರೋಧ ವ್ಯಕ್ತವಾಗಿದೆ. ಕಷ್ಟಪಟ್ಟು ವಿದ್ಯಾರ್ಥಿಗಳು ಸಿಇಟಿಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಮಾದ ಎಸಗಿದ್ದು, ವಿದ್ಯಾರ್ಥಿಗಳ ತಪ್ಪಿಲ್ಲ. ಪ್ರಾಧಿಕಾರ ಮಾಡಿದ ಎಡವಟ್ಟಿಗೆ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಶಿಕ್ಷೆ ನೀಡುವುದು ಸರಿಯಲ್ಲ. ಪಠ್ಯ ಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಕೈ ಬಿಟ್ಟು ಮೌಲ್ಯಮಾಪನ ಮಾಡಬೇಕು. ಮರು ಪರೀಕ್ಷೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಲಾಗಿದೆ.