ಮಂಡ್ಯ: ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಸ್ಥಗಿತವಾಗಿದ್ದ ಭಾರತ್ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ ಐಕ್ಯತಾ ಯಾತ್ರೆಗೆ ಮತ್ತಷ್ಟು ಹುರುಪು, ಉತ್ಸಾಹ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಸಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಗ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಪಾಲ್ಗೊಂಡ ಸೋನಿಯಾ ಗಾಂಧಿ ಸಾಂಕೇತಿಕವಾಗಿ ಪಾಲ್ಗೊಳ್ಳಬೇಕಿದ್ದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಿಗುತ್ತಿರುವ ಬೆಂಬಲ ಕಂಡು ಅರ್ಧ ಹೊತ್ತು ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಪಾದಯಾತ್ರೆ ವೇಳೆ ಸೋನಿಯಾ ಗಾಂಧಿಯವರ ಶೂ ಲೇಸ್ ಬಿಚ್ಚಿದ್ದು, ಈ ವೇಳೆ ಸ್ವತಃ ರಾಹುಲ್ ಗಾಂಧಿ ತಾಯಿಯ ಶೂ ಲೇಸ್ ಕಟ್ಟಿ ಗಮನ ಸೆಳೆದರು.
ಇದೇ ವೇಳೆ ಭಾರತ್ ಜೋಡೋ ಯಾತ್ರೆಯ ವೇಳೆ ಬೆಳ್ಳಾಲೆ ಗ್ರಾಮದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ನೋಡಲು ಜನರು ಮುಗಿಬಿದ್ದ ಘಟನೆ ನಡೆಯಿತು. ಈ ವೇಳೆ ಬಾಲಕಿಯೊಬ್ಬಳು ಕೆಳಗೆ ಬಿದ್ದಿದ್ದು, ತಕ್ಷಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಓಡೋಡಿ ಬಂದು ಬಾಲಕಿಯನ್ನು ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಸೋನಿಯಾ ಗಾಂಧಿ ಬಾಲಕಿ ಬೆನ್ನು ತಟ್ಟಿ ಸಂತೈಸಿದ ಘಟನೆ ನಡೆದಿದೆ.