ಸುಮಾರು 40 ಅಡಿ ಆಳದ ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ. ಹಗ್ಗದ ಸಹಾಯದಿಂದ ಸ್ವತಃ ಬಾವಿಗಿಳಿದ ಶ್ರೀಗಳು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ.
ಭಾನುವಾರದಂದು ಉಡುಪಿಯ ಮುಚ್ಚಲಕೋಡು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಚೆನ್ನೈ ಮೊಕ್ಕಾಂನಲ್ಲಿದ್ದ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬೆಕ್ಕಿನ ಮರಿ ಬಾವಿಗೆ ಬಿದ್ದ ವಿಷಯ ತಿಳಿದು ಬಂದಿದೆ.
ಕೂಡಲೇ ಹಗ್ಗಕ್ಕೆ ಬಕೆಟ್ ಕಟ್ಟಿ ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಆಗ ಸ್ವತಃ ಪೇಜಾವರ ಶ್ರೀ ಗಳೇ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ಮೇಲಕ್ಕೆ ತಂದಿದ್ದಾರೆ.