ಆರೋಗ್ಯ ವಿಮಾ ಕಂಪನಿಯೊಂದು ತನ್ನ ಗ್ರಾಹಕ ಸಸ್ಯಾಹಾರಿಯಾಗಿದ್ದ ಕಾರಣ ಅನಾರೋಗ್ಯಕ್ಕೊಳಗಾಗಿದ್ದಾರೆ. ಹೀಗಾಗಿ ಅವರಿಗೆ ವಿಮೆ ಪರಿಹಾರ ನೀಡಲು ಸಾಧ್ಯವಿಲ್ಲವೆಂಬ ವಿಚಿತ್ರ ಕಾರಣ ನೀಡಿದ್ದು, ಇದೀಗ ಗ್ರಾಹಕ ನ್ಯಾಯಾಲಯದಲ್ಲಿ ಮುಖಭಂಗವಾಗಿದೆ.
ಪ್ರಕರಣದ ವಿವರ: ನವದೆಹಲಿಯ ಠಕ್ಕರ್ ಎಂಬುವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿಮಿಟೆಡ್ ಕಂಪನಿಯ ಆರೋಗ್ಯ ವಿಮೆ ಹೊಂದಿದ್ದು, ಅವರು 2015 ರಲ್ಲಿ ರಕ್ತ ಕೊರತೆಯ ಕಾರಣಕ್ಕೆ ಚಿಕಿತ್ಸೆ ಪಡೆದಿದ್ದರು. ಅವರ ಹೋಮೋಸಿಸ್ಟೈನ್ ಮಟ್ಟ 23.52 ಕೆ ಏರಿಕೆಯಾಗಿದ್ದು ಇದು 5 ರಿಂದ 15 ರ ನಡುವೆ ಇರಬೇಕಿತ್ತು.
ಇದಕ್ಕೆ ಚಿಕಿತ್ಸಾ ವೆಚ್ಚ ಒಂದು ಲಕ್ಷ ರೂಪಾಯಿ ದಾಟಿದ್ದು, ಹೀಗಾಗಿ ವಿಮೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ವಿಟಮಿನ್ ಬಿ 12 ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ಉಲ್ಲೇಖಿಸಿದ್ದನ್ನೇ ಮುಂದಿಟ್ಟುಕೊಂಡ ವಿಮಾ ಕಂಪನಿ, ವಿಮಾದಾರ ಸಸ್ಯಹಾರಿಯಾಗಿದ್ದ ಕಾರಣ ಬಿ12 ಕೊರತೆ ಉಂಟಾಗಿದೆ. ಹೀಗಾಗಿ ವಿಮೆ ಮೊತ್ತ ನೀಡಲಾಗದು ಎಂದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಠಕ್ಕರ್ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದು, ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿರುವ ಆಯೋಗ, ಶೇಕಡಾ 9ರ ಬಡ್ಡಿ ದರದಲ್ಲಿ ಒಂದು ಲಕ್ಷ ರೂಪಾಯಿ ವಿಮಾ ಮೊತ್ತ ಪಾವತಿಗೆ ಸೂಚಿಸಿದೆ. ಅಲ್ಲದೆ ಅವರಿಗೆ ಉಂಟಾದ ಮಾನಸಿಕ ಒತ್ತಡ ಮತ್ತು ಕಾನೂನು ವೆಚ್ಚಗಳಿಗಾಗಿ 5000 ರೂ. ಹೆಚ್ಚುವರಿ ಮೊತ್ತವನ್ನು ಪಾವತಿಸಲು ತಿಳಿಸಿದೆ.