ಬೆಂಗಳೂರು: ಒಂದೆಡೆ ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಆರಂಭಿಸಿದ್ದರೆ ಇನ್ನೊಂದೆಡೆ ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರ ತುರ್ತು ಸಭೆ ನಡೆಯುತ್ತಿದೆ.
ಸಭೆಗೂ ಮುನ್ನ ಮಾತನಾಡಿದ ಸಿಎಂ ಬೊಮ್ಮಾಯಿ, ಮೇಕೆದಾಟು ಯೋಜನೆ, ಪಾದಯಾತ್ರೆ ಹಾಗೂ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವರ ಮಹತ್ವದ ಸಭೆ ನಡೆಸಲಾಗುತ್ತಿದೆ. ಅನೇಕ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದರು.
ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವಾಗ್ದಾಳಿ ನಡೆಸಿದ ಸಿಎಂ, 5 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಏನೂ ಮಾಡಿಲ್ಲ, ಬಳಿಕ ಸಮ್ಮಿಶ್ರ ಸರ್ಕಾರವಿದ್ದಾಗ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗಲೂ ಡಿಪಿಆರ್ ಸಲ್ಲಿಕೆ ಮಾಡಿಲ್ಲ. 6 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಗೆ ಯೋಜನೆ ಬಗ್ಗೆ ಯೋಚಿಸಲು ಆಗಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಾದಯಾತ್ರೆ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಗೆ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಕೃಷ್ಣೆಗಾಗಿ ಪಾದಯಾತ್ರೆ ಘೋಷಿಸಿದರು. ಕೂಡಲ ಸಂಗಮದಲ್ಲಿ ನೀರಿಗಿಳಿದು ಆಣೆ ಮಾಡಿದರು ಪ್ರತಿ ವರ್ಷ 10 ಸಾವಿರ ಕೋಟಿಯಂತೆ 50 ಸಾವಿರ ಕೋಟಿ ಕೊಡುತ್ತೇವೆ ಎಂದು ಆದರೆ 5 ವರ್ಷದಲ್ಲಿ ಕೃಷ್ಣೆಗಾಗಿ 7 ಕೋಟಿಯನ್ನು ಕೊಡಲಿಲ್ಲ. ಈಗ ಮೇಕೆದಾಟು ಹೆಸರಲ್ಲಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಯಾವಾಗಲೂ ಎಲ್ಲಾ ಸಂದರ್ಭದಲ್ಲೂ ಎಲ್ಲರನ್ನು ಮರಳು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಾದಯಾತ್ರೆ ನಾಟಕಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೇಕೆದಾಟು ಯೋಜನೆಗಾಗಿ ಚರ್ಚೆ ನಡೆಸಿದೆ. ನಾನು ಸಿಎಂ ಆದ ಮೇಲೆ ಯೋಜನೆಗಾಗಿ ಒತ್ತಡ ತಂದಿದ್ದು, ಡಿಪಿಆರ್ ಅಪ್ರೂವಲ್ ಗೆ ಸಿಡಬ್ಲು ಸಿಗೆ ಕಾವೇರಿ ಮಾನಿಟರಿ ಬೋರ್ಡ್ ಗೆ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಸಭೆಗಳು ಕೂಡ ನಡೆಯುತ್ತಿವೆ ಎಂದು ಹೇಳಿದರು.