ಸ್ವಂತ ಸಹೋದರನನ್ನೇ ಕೊಂದು ಶವವನ್ನು ಫ್ರಿಡ್ಜ್ನಲ್ಲಿಟ್ಟು ಪರಾರಿಯಾಗಿದ್ದ ಹಂತಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಸೀಲಂಪುರದ ಮನೆಯೊಂದರ ಫ್ರಿಡ್ಜ್ನಲ್ಲಿ ಶವ ಪತ್ತೆಯಾಗಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಸ್ವತಃ ತನ್ನ ಸಹೋದರನನ್ನೇ ಕೊಂದು ಶವವನ್ನು ಫ್ರಿಡ್ಜ್ನಲ್ಲಿಟ್ಟಿದ್ದ.
ಜುಲೈ 22 ರಂದು ಮನೆಯೊಂದರ ಫ್ರಿಡ್ಜ್ನಲ್ಲಿ 50 ವರ್ಷದ ಝಾಕಿರ್ ಎಂಬಾತನ ಶವ ಸಿಕ್ಕಿತ್ತು. ಕೊಲೆಯಾದ ಝಾಕಿರ್ನ ಸಹೋದರ ಅಬಿದ್ ಹುಸೇನ್ ಮತ್ತು ಜಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಝಾಕಿರ್ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತ ಮನೆಯಲ್ಲಿ ಸಾಕಷ್ಟು ಹಣ ಇಟ್ಟಿರುವ ಬಗ್ಗೆ ಇಬ್ಬರಿಗೂ ಮಾಹಿತಿ ಸಿಕ್ಕಿತ್ತು.
ಆ ಹಣವನ್ನು ದೋಚಲು ಅಬಿದ್ ಹಾಗೂ ಜಾಹಿದ್ ಪ್ಲಾನ್ ಮಾಡಿದ್ದಾರೆ. ನಗದು ದೋಚುವ ಉದ್ದೇಶದಿಂದ ಇಬ್ಬರೂ ಸೇರಿ ಝಾಕಿರ್ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿಟ್ಟಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಶವವನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಬಳಿಯಿಂದ 4 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆಗೆ ಬಳಸಿದ ಸುತ್ತಿಗೆ ಕೂಡ ಪತ್ತೆಯಾಗಿದೆ. ಮೃತ ಜಾಕಿರ್ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ, ಆತನ ಪತ್ನಿ ಮತ್ತು ಮಕ್ಕಳು ಬಹಳ ಹಿಂದೆಯೇ ದೂರವಾಗಿದ್ದರು. ಈಗ ಹಣಕ್ಕಾಗಿ ಸಹೋದರನೇ ಆತನನ್ನು ಹತ್ಯೆ ಮಾಡಿದ್ದಾನೆ.