alex Certify ಟೊಮೆಟೊ ವ್ಯಾಪಾರದ ವೇಳೆ ಬೌನ್ಸರ್ ನಿಯೋಜನೆ; ಸಂಕಷ್ಟಕ್ಕೆ ಸಿಲುಕಿದ ಮಾರಾಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೊ ವ್ಯಾಪಾರದ ವೇಳೆ ಬೌನ್ಸರ್ ನಿಯೋಜನೆ; ಸಂಕಷ್ಟಕ್ಕೆ ಸಿಲುಕಿದ ಮಾರಾಟಗಾರ

ದಿನೇ ದಿನೇ ಗಗನಕ್ಕೇರುತ್ತಿರುವ ಟೊಮೆಟೊ ಬೆಲೆಯ ಬಗ್ಗೆ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ರಾಜಕೀಯವಾಗಿ ಗಮನ ಸೆಳೆಯಲು ಮುಂದಾದ ಪ್ರಯತ್ನ ತರಕಾರಿ ಮಾರಾಟಗಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಉತ್ತರ ಪ್ರದೇಶದ ವಾರಣಾಸಿಯ ಲಂಕಾ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತ ಅಜಯ್ ಫೌಜಿ ತರಕಾರಿ ಮಾರಾಟಗಾರನ ಅಂಗಡಿಯೊಂದರಲ್ಲಿ ಟೊಮ್ಯಾಟೊ ರಕ್ಷಣೆಗೆ ಇಬ್ಬರು ಬೌನ್ಸರ್‌ಗಳನ್ನು ನಿಯೋಜಿಸಿದ್ದರು.

ಇದು ಟೊಮೆಟೊ ಬೆಲೆಯ ಬಗ್ಗೆ ಚೌಕಾಶಿ ಮಾಡುವಾಗ ಖರೀದಿದಾರರು ಆಕ್ರಮಣಕಾರಿಯಾಗುವುದನ್ನು ತಡೆಯುವ ಕ್ರಮ ಎಂದು ಹೇಳಿದ್ದರು. ಆದರೆ ಬೌನ್ಸರ್ ಗಳನ್ನು ನಿಯೋಜಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ರಾಜ್ ನಾರಾಯಣ್ ನನ್ನು ವಶಕ್ಕೆ ಪಡೆಯಲಾಗಿದ್ದು, ನಾಟಕೀಯ ಪ್ರತಿಭಟನೆ ನಡೆಸಿದ ಅಜಯ್ ಫೌಜಿ ಹಾಗೂ ಇಬ್ಬರು ಬೌನ್ಸರ್ ಗಳು ಪರಾರಿಯಾಗಿದ್ದಾರೆ.

ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ ಸಿರಗೋವರ್ಧನಪುರ ನಿವಾಸಿ ಅಜಯ್ ಫೌಜಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತರಕಾರಿ ಮಾರಾಟಗಾರ ರಾಜ್ ನಾರಾಯಣ್ ಮತ್ತು ಅವರ ಮಗ ಹಾಗು ಇತರರು ಪೊಲೀಸ್ ಠಾಣೆ ಸೇರುವಂತಾಗಿದೆ.

ಅಜಯ್ ಫೌಜಿ ಎಲ್ಲಿಂದಲೋ 500 ರೂ. ಮೌಲ್ಯದ ಟೊಮೆಟೊ ಖರೀದಿಸಿ ತನ್ನ ತರಕಾರಿ ಅಂಗಡಿಯಲ್ಲಿ ಬುಟ್ಟಿಗೆ ಹಾಕಿದ್ದರು ಎಂದು ತರಕಾರಿ ಮಾರಾಟಗಾರ ಪೊಲೀಸರಿಗೆ ತಿಳಿಸಿದ್ದಾರೆ. ಫೌಜಿ ಸ್ವತಃ ಅಂಗಡಿಯಲ್ಲಿ ಕುಳಿತು ಪ್ರತಿಭಟನೆಯ ಸಂಕೇತವಾಗಿ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದರು.

ವ್ಯಾಪಾರದ ವೇಳೆ ಅವರು ಅಂಗಡಿಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಹೆಚ್ಚುತ್ತಿರುವ ವಸ್ತುಗಳ ಬೆಲೆಗಳನ್ನು ಉಲ್ಲೇಖಿಸುವ ಫಲಕವನ್ನು ಹಾಕಿದ್ದರು. ಅದು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಬೆಲೆ ಏರಿಕೆಯನ್ನು ಸೂಚಿಸಿತ್ತು.

ಪ್ರತಿ ಕೆ.ಜಿ.ಗೆ ₹140-160ರೂ.ನಂತೆ ಟೊಮೆಟೊ ಮಾರಾಟ ಮಾಡುತ್ತಿದ್ದ ಫೌಜಿ, ಅಂಗಡಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಬೌನ್ಸರ್‌ಗಳನ್ನು ನಿಯೋಜಿಸಿದ್ದರು. ಆದರೆ ಅವರು ಬೌನ್ಸರ್ ಗಳನ್ನು ಎಷ್ಟು ಹಣ ನೀಡಿ ಬಾಡಿಗೆಗೆ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಬೌನ್ಸರ್‌ಗಳಿಗೆ ಸಂಬಂಧಿಸಿದ ಸುದ್ದಿ ಕ್ಲಿಪ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಬಿಜೆಪಿಯು ಟೊಮೆಟೊಗಳಿಗೆ ‘ಜೆಡ್-ಪ್ಲಸ್’ ಭದ್ರತೆಯನ್ನು ನೀಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...