ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರು ಮಳೆ ಅವಾಂತರದಿಂದಾಗಿಯೇ ಸುದ್ದಿ ಮಾಡ್ತಾ ಇದೆ. ನಿರಂತರವಾಗಿ ಸುರಿದ ವರ್ಷಧಾರೆಯಿಂದ ಸಿಲಿಕಾನ್ ಸಿಟಿ ಪ್ರವಾಹ ಸದೃಶವಾಗಿ ಪರಿಣಮಿಸಿತ್ತು. ಅನೇಕ ಮನೆಗಳು, ಅಪಾರ್ಟ್ಮೆಂಟ್, ಕಚೇರಿಗಳು, ರಸ್ತೆಗಳೆಲ್ಲ ಜಲಾವೃತವಾಗಿದ್ದವು.
ಕೆರೆಕೋಡಿ ಒಡೆದಿದ್ದರಿಂದ ನಗರದ ಬಹುತೇಕ ತಗ್ಗು ಪ್ರದೇಶಗಳಿಗೆಲ್ಲ ನೀರು ನುಗ್ಗಿ ಸಂಕಷ್ಟವೇ ಸೃಷ್ಟಿಯಾಗಿತ್ತು. ವಿದ್ಯುತ್ ಸಂಪರ್ಕವಿರಲಿಲ್ಲ. ಚರಂಡಿಗಳು ಮುಚ್ಚಿ ಹೋಗಿದ್ದವು. ಐಷಾರಾಮಿ ಕಾರುಗಳು ಮತ್ತು ವಾಹನಗಳೆಲ್ಲ ನೀರಿನಲ್ಲಿ ಮುಳುಗಿದ್ದವು.
ಮನೆಗಳೆಲ್ಲ ಜಲಾವೃತವಾಗಿದ್ದರಿಂದ ಜನರು ಎಲ್ಲವನ್ನೂ ಬಿಟ್ಟು ಬರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಭಾರೀ ಮಳೆಯನ್ನು ಎದುರಿಸಲು ನಗರದಲ್ಲಿ ಮೂಲ ಸೌಕರ್ಯಗಳೇ ಇಲ್ಲವೆಂದು ಸರ್ಕಾರವನ್ನು ಎಲ್ಲರೂ ದೂಷಿಸಿದ್ದರು.
ಜನರು ತಮ್ಮ ಕಚೇರಿಗಳಿಗೆ ಹೋಗಲು ಟ್ರ್ಯಾಕ್ಟರ್, ಜೆಸಿಬಿ ಬಳಸ್ತಾ ಇರೋ ವಿಡಿಯೋಗಳು ವೈರಲ್ ಆಗಿದ್ದವು. ಬಹುತೇಕರು ಬೆಂಗಳೂರಿನ ದುಃಸ್ಥಿತಿ ಬಗ್ಗೆ ವ್ಯಂಗ್ಯವಾಡುತ್ತ, ಆಕ್ರೋಶವನ್ನೂ ಹೊರಹಾಕಿದ್ದರು. ಬೆಂಗಳೂರಿನತ್ತ ಎಲ್ಲರೂ ಬೆಟ್ಟು ಮಾಡುವಂತಾಗಿತ್ತು. ಇದು ಸಿಲಿಕಾನ್ ಸಿಟಿ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಹ್ಯಾಶ್ಟ್ಯಾಗ್ #Kannadigas, #GetLostMigrants ಮತ್ತು #LeaveBengaluru ಟ್ರೆಂಡಿಂಗ್ ಆಗಿವೆ.
ರಾಜಧಾನಿಯನ್ನು ದೂಷಿಸುವವರೆಲ್ಲ ಬೆಂಗಳೂರನ್ನು ತೊರೆದುಬಿಡಿ ಎಂದು ಇಲ್ಲಿನ ನಾಗರೀಕರು ಸಿಟ್ಟನ್ನು ಹೊರಹಾಕಿದ್ದಾರೆ. ಪರಿಸ್ಥಿತಿಗೆ ಬೆಂಗಳೂರನ್ನು ದೂಷಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಬೆಂಗಳೂರು ಕೆಟ್ಟ ನಗರವೆಂದು ಟೀಕಿಸುತ್ತ ಇಲ್ಲೇ ಠಿಕಾಣಿ ಹೂಡಬೇಡಿ, ಇಲ್ಲಿಂದ ತೊಲಗಿ ಅಂತಾ ಬೆಂಗಳೂರಿಗರು ಇಲ್ಲಿಗೆ ವಲಸೆ ಬಂದವರನ್ನು ಒತ್ತಾಯಿಸಿದ್ದಾರೆ. ಈ ಕುರಿತ ಸಾಕಷ್ಟು ಟ್ವೀಟ್ಗಳು ವೈರಲ್ ಆಗಿವೆ.