ದೊಡ್ಡಬಳ್ಳಾಪುರ: ಎಟಿಎಂ ಮುರಿದು ಪರಾರಿಯಾಗಲು ಯತ್ನಿಸಿದ ಕಳ್ಳರು ಕೆಲವೇ ಗಂಟೆಗಳಲ್ಲಿ ಪೊಲೀಸರ ಕೈಗೆ ಅಚಾನಕ್ ಆಗಿ ಸಿಕ್ಕಿಬಿದ್ದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರದ ಮೆಳೆಕೋಟೆ ಕ್ರಾಸ್ನಲ್ಲಿ ಇಬ್ಬರು ಕಳ್ಳರು ಬೆಳ್ಳಂಬೆಳಗ್ಗೆ ಎಟಿಎಂಗೆ ಕನ್ನ ಹಾಕಿದ್ದಾರೆ. ಇವರು ಎಟಿಎಂ ಒಡೆದು ಹಣ ದೋಚಲು ಬೇಕಾದ ಎಲ್ಲ ಸಾಧನಗಳನ್ನು ಸಿದ್ದಪಡಿಸಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವುದಕ್ಕೂ ಮುನ್ನ ಸ್ವತಃ ಸ್ಥಳೀಯರೇ ಕಳ್ಳರನ್ನು ಬೆನ್ನಟ್ಟಿದ್ದಾರೆ. ಖತರ್ನಾಕ್ ಕಳ್ಳರು ತಮ್ಮಲ್ಲಿದ್ದ ಉಪಕರಣಗಳನ್ನೆಲ್ಲಾ ಎಸೆದು ಎಸ್ಕೇಪ್ ಆಗಿದ್ದಾರೆ. ಬೆನ್ನಟ್ಟಿದ್ರೂ ಅವರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯರಂತೆ ಉಡುಪಿನಲ್ಲಿ ಬಂದ ಪೊಲೀಸರು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಎಸೆದು ಹೋಗಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಠಾಣೆಗೆ ಹಿಂತಿರುಗುತ್ತಿದ್ದ ಪೊಲೀಸರ ಬಳಿಯೇ ಕಳ್ಳರು ಲಿಫ್ಟ್ ಕೇಳಿದ್ದಾರೆ. ಕಾರು ನಿಲ್ಲಿಸಿದ ಪೊಲೀಸರು ಕಳ್ಳರನ್ನು ತಮ್ಮ ಕಾರು ಹತ್ತಿಸಿದ್ದಾರೆ.
ಕಳ್ಳರಿಬ್ಬರ ಮಾತಿನ ಶೈಲಿಯಿಂದ ಅನುಮಾನಗೊಂಡ ಪೊಲೀಸರು, ನೇರವಾಗಿ ಪೊಲೀಸ್ ವಾಹನವನ್ನು ಠಾಣೆಗೆ ಚಲಾಯಿಸಿದ್ದಾರೆ. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಎಟಿಎಂ ಲೂಟಿಗೆ ಯತ್ನಿಸಿದವರು ಇದೇ ಕಳ್ಳರು ಎಂದು ತಿಳಿದುಬಂದಿದೆ. ಕಳ್ಳರನ್ನು 19 ವರ್ಷದ ಸಚಿನ್ ಹಾಗೂ ಗಗನ್ ಎಂದು ಗುರುತಿಸಲಾಗಿದೆ.