ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಾಕ್ ಡೌನ್ ಜಾರಿಯಾಗಿದ್ದರಿಂದ ಸಂಕಷ್ಟದಲ್ಲಿರುವವರಿಗೆ ವಿಶೇಷ ಪ್ಯಾಕೇಜ್ ನೀಡಿದ್ದಾರೆ.
ಅದೇ ರೀತಿ ಸಣ್ಣ ಮತ್ತು ಅತಿಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ನೀಡಲಾಗಿದೆ. ನಿಗದಿತ ವೇಳೆಯಲ್ಲಿ ಶುಲ್ಕ ಪಾವತಿಸಿದರೆ ವಿದ್ಯುತ್ ಬಿಲ್ ನಲ್ಲಿ ವಿನಾಯಿತಿ ನೀಡುವುದಾಗಿ ಘೋಷಿಸಲಾಗಿದೆ.
ಲಾಕ್ ಡೌನ್ ಜಾರಿಯಾಗಿದ್ದರಿಂದ ನಷ್ಟ ಅನುಭವಿಸಿದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ ನಿಗದಿತ ಶುಲ್ಕವನ್ನು ಎರಡು ತಿಂಗಳ ಅವಧಿಗೆ ಮನ್ನಾ ಮಾಡಲಾಗುವುದು. ಕೈಗಾರಿಕೆಗಳು ವಿದ್ಯುತ್ ಬಿಲ್ ತಡವಾಗಿ ಪಾವತಿಸಿದರೆ ವಿಧಿಸುವ ಬಡ್ಡಿಯನ್ನು ಎರಡು ತಿಂಗಳ ಅವಧಿಗೆ ಮುನ್ನಾ ಮಾಡಲಾಗುವುದು.
ಎಲ್ಲಾ ವರ್ಗದ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ವಿಶೇಷ ಸೌಲಭ್ಯ ನೀಡಲಾಗುವುದು. ನಿಗದಿತ ವೇಳೆಯಲ್ಲಿ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ ರಿಯಾಯಿತಿ ನೀಡಲಾಗುವುದು. ವಿಳಂಬ ಪಾವತಿಗೆ ವಿಧಿಸುವ ಬಡ್ಡಿ ಕಡಿತ ಮಾಡಲಾಗುವುದು. ಜೂನ್ 30 ರವರೆಗೆ ಬಾಕಿ ಪಾವತಿಸದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.