ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನಾಲ್ಕು ಹಂತಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಇದು ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಮುಂದುವರೆದುಕೊಂಡು ಬಂದಿದೆ. 4ನೇ ಹಂತದ ಲಾಕ್ಡೌನ್ ಮೇ 31ಕ್ಕೆ ಅಂತ್ಯಗೊಳ್ಳಲಿದ್ದು, ಇದರ ಬಳಿಕ ಐದನೇ ಹಂತದ ಲಾಕ್ಡೌನ್ ಜಾರಿಗೊಳ್ಳಲಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
4ನೇ ಹಂತದ ಲಾಕ್ಡೌನ್ ಜಾರಿ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ರಾಜ್ಯದ ಪ್ರಮುಖ ಆದಾಯದ ಮೂಲವಾಗಿರುವ ಮದ್ಯ ಮಾರಾಟವನ್ನು ಆರಂಭಿಸಲಾಗಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದ್ದು, ಜೂನ್ 1 ರಿಂದ ಹಲವು ಷರತ್ತುಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಹೋಟೆಲ್ ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಆದರೆ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಕ್ಕೆ ಅವಕಾಶ ಸಿಗುವುದು ಅನುಮಾನವೆಂದು ಹೇಳಲಾಗಿದೆ. ಸಚಿವ ಆರ್. ಅಶೋಕ್ ಕೂಡ, ಬಾರ್ ಅಂಡ್ ರೆಸ್ಟೋರೆಂಟ್ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದು ಹೇಳಿದ್ದು, ಹೋಟೆಲ್ ಆರಂಭಕ್ಕೆ ಅವಕಾಶ ಕಲ್ಪಿಸಿಕೊಡುವ ಕುರಿತು ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ.